ಬಗೆಹರಿಯದ ವಿವಾದ :ಒಮ್ಮತಕ್ಕೆ ಬರಲು ಕರೆ
---------------------------------------------------------
ಹುಳಿಯಾರು:ಸಮೀಪದ ಯಳನಾಡು ಶ್ರೀ ಸಿದ್ಧರಾಮೇಶ್ವರ ಸ್ವಾಮಿಯ ಶ್ರೀ ಕ್ಷೇತ್ರದಲ್ಲಿ ಆರಂಭವಾಗಬೇಕಿರುವ ದಸರಾ ಜಾತ್ರಾಮಹೋತ್ಸವದ ಆಚರಣೆಯ ಬಗ್ಗೆ ತಹಸಿಲ್ದಾರ್ ಸಮಕ್ಷಮದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಹಿಂದಿನ ಸಮಸ್ಯೆಯೇ ಮರುಕಳಿಸಿ ಯಾವೊಂದು ತಿರ್ಮಾನಕ್ಕೆ ಬಾರದೆ ಕಡೆಗೆ ತಹಸೀಲ್ದಾರ್ ಅವರು ಗ್ರಾಮಸ್ಥರೇ ಸೇರಿ ತಾತ್ಕಾಲಿಕ ಸಮಿತಿ ರಚಿಸಿಕೊಂಡು ಒಮ್ಮತದ ತೀರ್ಮಾನ ಕೈಗೊಂಡು ಆಚರಿಸುವಂತೆಯೂ ಇಲ್ಲದಿದ್ದ ಪಕ್ಷದಲ್ಲಿ ಮೇಲಾಧಿಕಾರಿಗಳ ತೀರ್ಮಾನದಂತೆ ನಿರ್ಣಯ ಕೈಗೊಳ್ಳುವುದಾಗಿಯೂ ತಿಳಿಸಿ ಸಭೆ ಮುಗಿಸಿದ ಘಟನೆ ಗುರುವಾರ ರಾತ್ರಿ ನಡೆಯಿತು.
ಶ್ರೀಕ್ಷೇತ್ರದಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ತನ್ನದೆ ಆದ ಇತಿಹಾಸವಿದ್ದು ಇಲ್ಲಿ ನಡೆಯುವ ಸ್ವಾಮಿಯ ಹನ್ನೊಂದು ದಿನಗಳ ಕಾಲದ ದಸರಾ ಮಹೋತ್ಸವಕ್ಕೆ ದೂರದ ಅನೇಕ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿಕೊಂಡು ಹೋಗುವ ಪರಿಪಾಠ ನಡೆದು ಬಂದಿದೆ. ಈವೊಂದು ಸಂಪ್ರದಾಯಕ್ಕೆ ಕೆಲತಿಂಗಳಿನ ಹಿಂದೆ ಗ್ರಾಮದಲ್ಲಿ ದೇವರು ಕರೆದೊಯ್ಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಉಂಟಾದ ವೈಮನಸ್ಯದಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟಿಲ್ಲದೆ ನಿತ್ಯದ ಪೂಜಾಕಾರ್ಯದಲ್ಲೂ ಅಡಚಣೆಯುಂಟಾಗಿದ್ದು ದಸರಾ ಜಾತ್ರಾ ಮಹೋತ್ಸವದ ಮೇಲೂ ಪರಿಣಾಮ ಬೀರಿ ದಸರಾ ಜಾತ್ರೆ ನಡೆಯುವ ವಿಚಾರವೇ ಕಗ್ಗಂಟಾಗಿ ಪರಿಣಮಿಸಿದೆ.
ಗ್ರಾಮದಲ್ಲಿ ಪೂಜಾ ಕಾರ್ಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು ಕೆಲವೊಂದು ಪೂಜಾಕೈಂಕರ್ಯಗಳನ್ನು ಕೈಬಿಟ್ಟಿರುವುದು ಸಮಸ್ಯೆ ಬಗೆಹರಿಯದೆ ಮುಂದುವರಿಕೆಗೆ ಅವಕಾಶವಾಗಿದೆ.ಕಳೆದ ಹಲವಾರು ದಿನಗಳಿಂದಲೂ ಹೊಗೆಯಾಡುತ್ತಿದ್ದ ಸಮಸ್ಯೆ ಬಗೆಹರಿಸಿ ದಸರಾ ಆಚರಣೆಗೆ ಅನುವು ಮಾಡಲು ತಹಸೀಲ್ದಾರ್ ಗಂಗೇಶ್ ಇಂದು ಗ್ರಾಮಸ್ಥರ ಸಭೆ ಸೇರಿಸಿ ಎಲ್ಲರ ಅಹವಾಲು ಕೇಳಿದರು.
ಸಭೆ ಪ್ರಾರಂದಲ್ಲಿಯೇ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ ಗ್ರಾಮಸ್ಥರು ಕಳೆದ ಮೂರು ತಿಂಗಳ ಹಿಂದೆ ನಡೆದ ದೊಡ್ಡ ಜಾತ್ರೆಯ ಉಸ್ತುವಾರಿ ಸಮಿತಿ ವಜಾಮಾಡುವುದರ ಜೊತೆಗೆ ಜಾತ್ರೆಗೆ ವಸೂಲಿಯಾದ ಹಣ,ದವಸ ಧಾನ್ಯ ಹಾಗೂ ಜಾತ್ರೆಯ ಖರ್ಚುವೆಚ್ಚದ ತಪಸೀಲು ನೀಡುವಂತೆ ಒತ್ತಾಯಿಸಿದರು.
ನಂತರ ದಸರಾ ಆಚರಣೆಯ ಬಗ್ಗೆ ಚರ್ಚೆ ತಾರಕಕ್ಕೇರಿ ಹಿಂದಿನ ಸಮಸ್ಯೆ ಬಗ್ಗೆ ಎರಡು ಗುಂಪಿನ ನಡುದೆ ಹೊಗೆಯಡುತ್ತಿದ್ದ ಸಮಸ್ಯೆ ಅನಾವರಣಗೊಂಡಿತು. ಉತ್ಸವ ಸಾಗುವ ಸಮಸ್ಯೆ ಬಗೆಹರಿಸದೆ ದಿಢೀರನೇ ಸಭೆ ಕರೆದು ಜಾತ್ರೆ ನಡೆಸಿ ಎಂದರೆ ಹೇಗೆ ಸಾಧ್ಯ.ಈ ದಿನಕ್ಕಾಗಲೇ ಜಾತ್ರಾ ಮಹೋತ್ಸವದ ಕರಪತ್ರ ಸಿದ್ಧಗೊಂಡು ಅಮವಾಸ್ಯೆ ಮರುದಿನದಿಂದ ಪೂಜಾ ಕಾರ್ಯಕ್ರಮ ಆರಂಭಗೊಳ್ಳಬೇಕಿತ್ತು.ಈ ಬಗ್ಗೆ ತಾವು ತಾತ್ಸಾರ ಮಾಡಿದ್ದೀರೆಂದು ಗ್ರಾಮಸ್ಥರು ತಹಸೀಲ್ದಾರ್ ಮೇಲೆ ಹರಿಹಾಯ್ದರು.
ನಂತರ ಮಾತನಾಡಿದ ತಹಸಿಲ್ದಾರ್ ಭಿನ್ನಾಭಿಪ್ರಾಯ ಕೈ ಬಿಟ್ಟು ದಸರಾ ಆಚರಣೆಗೆ ಮುಂದಾಗುವಂತೆ ಹಾಗೂ ಗ್ರಾಮದ ಎಲ್ಲಾ ಭಕ್ತರು ಒಂದಾಗಿ ಸ್ವಾಮಿ ಕಾರ್ಯ ನಡೆಸಿಕೊಂಡುಹೋಗುವಂತೆ ಮನವಿ ಮಾಡಿದರು.
ಇಷ್ಟಾದರೂ ಸಹ ಎರಡು ಗುಂಪುಗಳ ನಡುವೆ ಮಾತಿನ ಚಕಮುಖಿ ಕೊನೆಗೊಳ್ಳದ ಹಿನ್ನಲೆಯಲ್ಲಿ ಜಾತ್ರೆ ಮಹೋತ್ಸವಕ್ಕೆ ಮುಜರಾಯಿ ಇಲಾಖೆಯಿಂದ ಅಪ್ಪಣೆ ನೀಡಿದ್ದು ನೀವುಗಳೇ ಸೇರಿ ಸಮಿತಿ ರಚಿಸಿಕೊಂಡು ಜಾತ್ರೆ ನಡೆಸಿ ಎಂದು ಜವಬ್ದಾರಿ ನೀಡಿದರು.
ಇದಕ್ಕೂ ನೀವು ತೀರ್ಮಾನಕ್ಕೆ ಬಾರದಿದ್ದ ಪಕ್ಷದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಸಭೆ ಮುಕ್ತಾಯಗೊಳಿಸಿದರು.
ಸಭೆಯಲ್ಲಿ ಕಂದಾಯ ತನಿಖಾಧಿಕಾರಿ ಹನುಮಂತನಾಯಕ್,ಗ್ರಾಮಲೆಖ್ಖಿಗ ಶ್ರೀನಿವಾಸ್, ಮುಖಂಡರುಗಳಾದ ವೈ.ಆರ್.ಮಲ್ಲೀಕಾರ್ಜುನಯ್ಯ, ಸುರೇಶ್, ಪ್ರಕಾಶ್, ರಾಮಯ್ಯ, ಲೋಕೇಶ್, ಜಯಸಿಂಹ, ಕೃಷ್ಣಪ್ಪ,ಜಗದೀಶ್,ದೇವರಾಜು,ನಂದಿಹಳ್ಳಿ ಶಿವಣ್ಣ ಮೊದಲಾದವರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ