ಕಳೆದ ಒಂದು ತಿಂಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಮಹಿಳೆಯರು ದಿನಬೆಳಗಾದರೆ ನೀರಿಗಾಗಿ ಪರದಾಡುವಂತಾಗಿದೆ ಎಂದು ಆರೋಪಿಸಿ ಸುಮಾರು ಐವತ್ತಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯ್ತಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸಿಕೊಂಡ ಘಟನೆ ಹುಳಿಯಾರಿನಲ್ಲಿ ಜರುಗಿದೆ.
ಇಲ್ಲಿನ ಆಜಾದ್ ನಗರಕ್ಕೆ ಬೋರನಕಣಿವೆ ನೀರು ಹಾಗೂ ರೋಟರಿ ಕ್ಲಬ್ ನವರು ವ್ಯವಸ್ಥೆಗೊಳಿಸಿರುವ ಮಿನಿಟ್ಯಾಂಕಿನಿಂದ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ ತಿಂಗಳಿಂದ ಮೋಟರ್ ಕೆಟ್ಟು ಬೋರನಕಣಿವೆಯ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಬೋರನಕಣಿವೆ ನೀರು ನಿಂತು ವಾರದಲ್ಲಾಗಲೇ ರೋಟರಿ ಬೋರಿನ ನೀರು ಪೈರೈಕೆಯಲ್ಲಿಯೂ ಸಹ ವ್ಯತ್ಯಯವಾಗಿ ದೂರದ ತೋಟದ ಕೊಳವೆ ಬಾವಿಯಿಂದ ನೀರು ಹೊತ್ತು ತರುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅಲ್ಲದೆ, ಪಂಚಾಯ್ತಿ ನೀರು ವ್ಯತ್ಯಯವಾದಾಗ ಇಲ್ಲಿನ ಎಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ಪೂರೈಸುತ್ತಿದ್ದ ಕೈಪಂಪು ಕೆಟ್ಟು ಆರು ತಿಂಗಳಾದರೂ ಸಹ ದುರಸ್ಥಿ ಮಾಡದೆ ತಾತ್ಸಾರ ಮಾಡಲಾಗಿದೆ. ಜೊತೆಗೆ ಪಂಚಾಯ್ತಿಯಿಂದ ಪ್ರತ್ಯೇಕ 2 ಪೈಪ್ ಲೈನ್ ಮಾಡಿ 6 ತಿಂಗಳಾದರೂ ಅದಕ್ಕೆ ಮೈನ್ ಲೈನ್ ಸಂಪರ್ಕ ಕೊಡದಿದ್ದ ಕಾರಣ ನೀರಿನ ಸಮಸ್ಯೆ ಇಲ್ಲಿ ಆಗಿಂದಾಗೆ ಮರುಕಳಿಸುತ್ತಿರುತ್ತದೆ ಎಂದು ಆಪಾದಿಸಿದರು.
ಗ್ರಾಮ ಪಂಚಾಯ್ತಿಗೆ ನೀರಿನ ಸುಂಕ ಕಟ್ಟುತ್ತಿದ್ದರೂ ಕೂಡ ಮೋಟರ್ ಹಾಗೂ ಪೈಪ್ ಲೈನ್ ದುರಸ್ಥಿಗಾಗಿ ಇಲ್ಲಿನ ನೀರುಘಂಟಿ ರಾಮಯ್ಯ ಅವರಿಗೆ ಪ್ರತಿ ಮನೆಗಳಿಂದ ಹಣ ಸಂಗ್ರಹಿಸಿ ಕೊಡಲಾಗಿದೆ. ಅಲ್ಲದೆ, ಸ್ವಚ್ಚತೆ ಸೇರಿದಂತೆ ಇತರೆ ವೆಚ್ಚ ಸಬೂಬು ಹೇಳಿ ಪ್ರತ್ಯೇಕವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಇಷ್ಟು ಕೊಟ್ಟರೂ ಸಹ ದುಡ್ಡು ಕೊಡುವ ಬೀದಿಗಳಿಗೆ ಮೇಲಿಂದ ಮೇಲೆ ನೀರು ಬಿಟ್ಟು ದುಡ್ಡು ಕೊಡದವರಿಗೆ ನೀರು ಬಿಡದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಸಹ ಮಾಡಿದರು.
ಪ್ರತಿಭಟನಾನಿರತರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಕಾರ್ಯದರ್ಶಿ ಗೋಪಾಲಕೃಷ್ಣ ಅವರು ಪ್ರತಿಭಟನಾಕಾರರೊಂದಿಗೆ ಸಮಸ್ಯೆಯ ಸ್ಥಳಕ್ಕೆ ಕುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇಲ್ಲಿನ ಸರ್ಕಾರಿ ಶಿಕ್ಷಕರೊಬ್ಬರು ರೈಸಿಂಗ್ ಲೈನಿನ್ನಿಂದ ತಮ್ಮ ನೀರಿನ ಟ್ಯಾಂಕಿಗೆ 3 ಅಕ್ರಮ ನಲ್ಲಿ ಸಂಪರ್ಕ ಪಡೆದಿದ್ದರಿಂದ ಸಾರ್ವಜನಿಕ ಮಿನಿ ಟ್ಯಾಂಕಿಗೆ ನೀರು ಹೋಗದೆ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿತು.
ತಕ್ಷಣ ತಮ್ಮ ಸಿಬ್ಬಂಧಿಗೆ ಅಕ್ರಮ ಸಂಪರ್ಕ ಕಡಿತಗೊಳಿಸಲು ಸೂಚಿಸಿ. ಅಕ್ರಮ ನಲ್ಲಿ ಸಂಪರ್ಕ ಪಡೆದಿರುವ ಶಿಕ್ಷಕರಿಗೆ ದಂಡ ಸಹಿತ ನೋಟಿಸ್ ನೀಡುವುದಾಗಿ ಹಾಗೂ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನೀರುಘಂಟಿ ರಾಮಯ್ಯ ಅವರ ಬದಲಿಗೆ ಗೌಸ್ಪೀರ್ ಎನ್ನುವವರನ್ನು ನೇಮಿಸುವುದಾಗಿ ತಿಳಿಸಿ ಇನ್ನು ಮುಂದೆ ನೀರಿನ ಸಮಸ್ಯೆ ಮರುಕಳಿಸದಂತೆ ಭರವಸೆ ನೀಡಿ ಪ್ರತಿಭಟನಾಕಾರರನ್ನು ಶಾಂತಗೊಳಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ