ವಿಷಯಕ್ಕೆ ಹೋಗಿ

ಸ್ವಾತಂತ್ರ್ಯೋತ್ಸವಕ್ಕೆ ವಿದ್ಯಾರ್ಥಿಗಳ ತಾಲೀಮು

            ಭಾರತದ ೬೯ನೇ ಸ್ವಾತಂತ್ರ್ಯೋತ್ಸವಕ್ಕೆ ಪಟ್ಟಣದ ಎಲ್ಲಾ ಶಾಲೆಗಳಲ್ಲಿ ಭರದ ಸಿದ್ಧತೆ ನಡೆದಿದ್ದು ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಯಾ ಶಾಲೆಗಳಲ್ಲಿ ಶುಕ್ರವಾರದಂದು ಶಿಸ್ತುಬದ್ದ ತಾಲೀಮು ನಡೆಯಿತು.
                      ಪಟ್ಟಣದ ಎಂಪಿಎಸ್ ಶಾಲಾ ಮೈದಾನದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯದಿನಾಚರಣೆಗೆ ಎಲ್ಲಾ ಶಾಲಾಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು ಅಲ್ಲಿ ಧ್ವಜಾರೋಹಣದ ನಂತರ ನಡೆಯುವ ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಳೆದ 15 ದಿನಗಳಿಂದ ಪೂರ್ವ ತಯಾರಿ ಎಲ್ಲಾ ಶಾಲೆಗಳಿಲ್ಲಿ ಜೋರಾಗಿ ನಡೆದಿದ್ದು ಇಂದು ಆಯಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಅಂತಿಮ ತಾಲೀಮು ನಡೆಸಿ ವೀಕ್ಷಿಸಲಾಯಿತು.
                    ವಾಸವಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಪ್ರದರ್ಶನಕ್ಕಾಗಿ ದೈಹಿಕ ಶಿಕ್ಷಕರ ನೇತೃತ್ವದಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡು ಅಂತಿಮ ಕಸರತ್ತು ನಡೆಸಲಾಯಿತು.ನಾಳಿನ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಡೆಸಿದ ಪೂರ್ವ ತಯಾರಿಯಲ್ಲಿ ಧ್ವಜವಂದನೆ,ರೈತಗೀತೆ,ವಂದೇಮಾತರಂ,ಧ್ವಜಾರೋಹಣ,ಬ್ಯಾಂಡ್ ಒಟ್ಟಿಗೆ ರಾಷ್ಟ್ರಗೀತೆ ಹಾಡುವುದು ಹಾಗೂ ಪಥಸಂಚಲನೆಯ ಕ್ರಮದ ಬಗ್ಗೆ ವಿವರಿಸಲಾಯಿತು.
ಹುಳಿಯಾರಿನ ವಾಸವಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ನಡೆದ ಶಿಸ್ತುಬದ್ದ ತಾಲೀಮು
                         ಶಾಲೆಯಲ್ಲಿನ ಮಕ್ಕಳನ್ನು ನಾಳಿನ ಸ್ವಾತಂತ್ರ್ಯೋತ್ಸವಕ್ಕೆ ಶಿಕ್ಷಕವೃಂದದವರು ಹಾಗೂ ದೈಹಿಕ ಶಿಕ್ಷಕರು ಸೇರಿಕೊಂಡು ಸಜ್ಜುಗೊಳಿಸಿದ್ದು ಮಕ್ಕಳು ಸಹಾ ಅಷ್ಟೇ ಉತ್ಸಾಹದಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಲು ತಯಾರಾಗಿದ್ದಾರೆ ಎನ್ನುತ್ತಾರೆ ಮುಖ್ಯ ಶಿಕ್ಷಕ ರಮೇಶ್.


           ದೇಶ ಪ್ರೇಮದ ಸಂಕೇತವಾದ ಸ್ವಾತಂತ್ರ್ಯೋತ್ಸವದಂದು ತಮ್ಮ ತ್ಯಾಗಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ನಾಯಕರುಗಳಿಗೆ, ಯೋಧರಿಗೆ, ಸ್ವಾತಂತ್ರ್ಶಹೋರಾಟಗಾರರಿಗೆ ಪಥಸಂಚಲನದ ಮೂಲಕ ಗೌರವ ಸಲ್ಲಿಸಲು ಮಕ್ಕಳು ಸಜ್ಜಾಗಿದ್ದಾರೆ.

ಕಾಮೆಂಟ್‌ಗಳು