ಇತ್ತೀಚಿನ ದಿನಗಳಲ್ಲಿ ರೈತರು ನಾನಾ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು ರೈತರು ಯಾವುದೇ ಕಾರಣಕ್ಕೂ ಧೃತಿಗೆಡದೆ ಅತ್ಮಹತ್ಯೆಯಂತ
ನಿರ್ಧಾರ ಕೈಗೊಳ್ಳಬಾರದೆಂದು ರೈತ ಸಂಘದ ಅಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಮನವಿಮಾಡಿದರು.
ಪಟ್ಟಣದಲ್ಲಿ ಸೋಮವಾರ ರೈತಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪರಿವೀಕ್ಷಣಾ ಮಂದಿರದಿಂದ ನಾಡಕಚೇರಿವರೆಗೆ ಜಾಗೃತಿ ಜಾಥಾ ನಡೆಸಿ ರೈತರು ಆತ್ಮಹತ್ಯೆ ಶರಣಾಗದಂತೆ ಉಪತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರೈತರ ಆತ್ಮಹತ್ಯೆ ತಡೆಗಟ್ಟಲು, ಸಂಕಷ್ಟದಲ್ಲಿರುವ ರೈತರಿಗೆ ಮನೋಸ್ಥೈರ್ಯ ತುಂಬಲು ಆತ್ಮಹತ್ಯೆ ತಡೆಗೆ ರೈತರ ನಡಿಗೆ ಎಂಬ ಜಾಗೃತಿ ಅಭಿಯಾನವನ್ನು ಎಲ್ಲಾ ಹಳ್ಳಿಗಳಲ್ಲು ಆಯೋಜಿಸಲಾಗುತ್ತಿದೆ ಎಂದರು
ದಲಿತ ಮುಖಂಡ ಲ.ಪು.ಕರಿಯಪ್ಪ ಮಾತನಾಡಿ ಕಳೆದೊಂದು ತಿಂಗಳಿನಿಂದಲೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಭವಿಸಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ. ಬರೀ ಸಾಂತ್ವಾನದಿಂದ ಪ್ರಯೋಜನವಾಗದು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರದ ದವಡೆಯಲ್ಲಿರುವ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕು ಎಂದು ಒತ್ತಾಯಿಸಿದರು.
ಜಾಥಾದಲ್ಲಿ ಸೃಜನಾ ಮಹಿಳಾ ವೇದಿಕೆಯ ಜಯಮ್ಮ, ಗುಜರಿನಾಗಣ್ಣ, , ಮುಖಂಡರಾದ ಸೈಯದ್ ಜಮೀರ್, ಇಮ್ರಾಜ್, ಟಿಪ್ಪುಸಂಘದ ಅಪ್ಸರ್,ಗೂಬೇಹಳ್ಳಿ ಚಂದ್ರು,ಸೀಗೆಬಾಗಿ ಮುನಿಯಪ್ಪ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ