ರೈತರ ಹಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸಕಾ೯ರ ಸಾರ್ವಜನಿಕರ ಒಳಿತಿಗಾಗಿ ಧರಣಿ, ಪ್ರತಿಭಟನೆ, ಹೋರಾಟ ಮಾಡಿದ ವಿವಿಧ ಜಿಲ್ಲೆಗಳ ರೈತರ ಮೇಲೆ ದಾಖಲಾಗಿದ್ದ ಸುಮಾರು 82 ಕೇಸ್ಗಳನ್ನು ವಾಪಸ್ಸು ಪಡೆಯುವುದಾಗಿ ತೀಮಾ೯ನಿಸಲಾಗಿದೆ ಎಂದು ಹೇಳಿರುವುದು ಸುಳ್ಳು ಭರವಸೆಯೇ ಎಂಬುದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ರೈತರ ಪ್ರಶ್ನೆಯಾಗಿದೆ.
ಹಲವಾರು ಬಾರಿ ರೈತರ ಸಭೆಗಳಲ್ಲಿ,ರೈತ ಮುಖಂಡರೊಂದಿಗೆ ವಿಧಾನಸೌಧ ಸಭಾಂಗಣದಲ್ಲಿ ನಡೆಸಿದ ಚಚೆ೯ಯ ಸಂದರ್ಭದಲ್ಲಿ ಮೇಲಿನ ಹೇಳಿಕೆಯನ್ನು ಪುನರಾವರ್ತನೆ ಮಾಡುತ್ತಲೆ ಬಂದಿರುವ ಮುಖ್ಯಮಂತ್ರಿಗಳು ಕೇವಲ ,ಹಾಸನ,ಧಾರವಾಡ,ಮಂಡ್ಯ, ಬೆಳಗಾವಿ, ದಾವಣಗೆರೆ ಜಿಲ್ಲೆಗಳ ರೈತರ 47 ಪ್ರಕರಣಗಳನ್ನು ಮಾತ್ರ ಹಿಂಪಡೆದು ತುಮಕೂರು ಜಿಲ್ಲೆಯ ರೈತರ ಪ್ರಕರಣವನ್ನು ಹಾಗೆ ಉಳಿಸಿರುವ ಹಕೀಕತ್ತಾದರೂ ಏನೆಂದು ಎಂಟು ವರ್ಷಗಳಿಂದ ಮೊಕದ್ದಮೆ ಎದುರಿಸುತ್ತಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ರೈತರು ಕೇಳುತ್ತಿದ್ದಾರೆ.
ಇಂದು ನಿನ್ನೆಯದಲ್ಲ: ಕರಂಟ್,ಗೊಬ್ಬರ,ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಗಣಿಗಾರಿಕೆ ವಿರುದ್ದ ಧ್ವನಿಯೆತ್ತಿದ ತಾಲೂಕಿನ ರೈತರುಗಳ ಮೇಲೆ ದಾಖಲಾಗಿರುವ ಮೊಕದ್ದಮೆಗಳು ಇಂದು ನಿನ್ನೆಯದಲ್ಲ.ಇಲ್ಲಿನ ರೈತರು ಬರೊಬ್ಬರಿ ಎಂಟು ವರ್ಷಗಳಿಂದಲ್ಲೂ ಕೋಟ್೯ ಕಛೇರಿ ಸುತುತ್ತಲೇ ಇದ್ದಾರೆ.
ಯಾವ ಕಾರಣಕ್ಕೆ: ಹಸಿರು ಸೇನೆಯ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್ ಹೇಳುವ ಪ್ರಕಾರ ಪಟ್ಟಣಗಳಿಗೆ ದಿನಪೂರ ವಿದ್ಯುತ್ ನೀಡಿ ಹಳ್ಳಿಗಳಿಗೆ ರಾತ್ರಿ ಮಾತ್ರ ತ್ರೀಫೇಸ್ ವಿದ್ಯುತ್ ನೀಡುವ ತಾರತಮ್ಯ ನೀತಿಯನ್ನು ಹಿಂದಿನಿಂದಲೂ ಸಕಾ೯ರ ಅನುಸರಿಸುತ್ತಿತ್ತು. ರೈತ ರಾತ್ರಿಯಲ್ಲಿ ನಿದ್ದೆಗೆಟ್ಟು ತೋಟಗಳಿಗೆ ನೀರುಣಿಸುವ ಅನಿವಾರ್ಯ ಕರ್ಮ ಬಂದೋದಗಿತ್ತು. ಇದರಿಂದ ಬೇಸತ್ತು 2002 ರಲ್ಲಿ ಕಾವೇರಿ ಭವನ್ ಎದುರು 1 ತಿಂಗಳು ಧರಣಿ ನಡೆಸಿದೆವು. ಅಲ್ಲಿ ನ್ಯಾಯ ಸಿಗದಿದ್ದ ಕಾರಣ ಚಿ.ನಾ.ಹಳ್ಳಿಯಲ್ಲಿ ರಸ್ತೆ ತಡೆ ಚಳುವಳಿ ಮಾಡಿದೆವು. ಪರಿಣಾಮ 22 ರೈತರ ಮೇಲೆ 3 ಮೊಕದ್ದಮೆ ದಾಖಲಾದವು. ಸಮಾನ ವಿದ್ಯುತ್ ನೀತಿ ಜಾರಿಗೆ ಬರಬೇಕೆಂದು ನಾವು ಕೇಳಿದ್ದು ತಪ್ಪೆ ಎಂದು ಪ್ರಶ್ನಿಸುತ್ತಾರೆ.
ತಾಲ್ಲೂಕ್ ರೈತಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್ ಪ್ರಕಾರ ಮೊದಲೇ ಹಣ ಪಾವತಿಸಿ ಪಡೆದಿರುವ ಮೀಟರ್ ಮೇಲೆ ಪ್ರತಿ ಬಳಕೆದಾರರಿಗೂ ಮೀಟರ್ ಮಿನಿಮಂ ಎಂದು ಹಣ ವಸೂಲಿ ಮಾಡುತ್ತಿರುವುದು ತಪ್ಪಾಗಿದ್ದು ಮೀಟರ್ ಮಿನಿಮಂ ಎಂದು ಈಗಾಗಲೇ ಬಳಕೆದಾರರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವುದನ್ನು ಹಿಂದಿರುಗಿಸಿ ಇಲ್ಲವೇ ವಿದ್ಯತ್ ಬಿಲ್ನಲ್ಲಿ ಸರಿತೂಗಿಸಿ ಎಂದು ಮೀಟರ್ ಹಿಂದುರುಗಿಸುವ ಚಳುವಳಿಯನ್ನು ಹುಳಿಯಾರು ಕೆಇಬಿ ಮುಂದೆ ಹಮ್ಮಿಕೊಂಡ ಕಾರಣಕ್ಕೆ 18 ರೈತರ ಮೇಲೆ ಅಂದು ಮತ್ತೊಂದು ಪ್ರಕರಣ ದಾಖಲಾಯಿತು.
ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿ ನಮ್ಮದು ರೈತ ಪರ ಸಕಾ೯ರ ಎನ್ನುತ್ತ ರೈತರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವ ಹೇಳಿಕೆಯ ನೆರಳಲ್ಲಿ ಬಿಜೆಪಿ ಕಾರ್ಯಕರ್ತರ ಪ್ರಕರಣ ವಾಪಸ್ ಪಡೆದಿರುವ, ಗಣಿ ಧಣಿಗಳ ಕ್ರಿಮಿನಲ್ ಕೇಸು ವಾಪಸ್ ಪಡೆದ ಮುಖ್ಯಮಂತ್ರಿಗಳಿಗೆ ನ್ಯಾಯ ಸಮ್ಮತವಾಗಿದ್ದ ನಮ್ಮ ಕೇಸು ವಾಪಸ್ ಪಡೆಯುವ ಮನಸ್ಸಾಗಿಲ್ಲವೇ ಎಂದು ಕೇಳುತ್ತಾರೆ.
ವರ್ಷ ಉರುಳಿತು: ತಾಲ್ಲೂಕ್ ರೈತರ ಮೇಲೆ ಹೂಡಲಾಗಿರುವ ಮೊಕದಮೆಗಳ ವಾಪಸ್ಸ್ ಪಡೆಯುವುದಾಗಿ ಕಾನೂನು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುರೇಶ ಕುಮಾರ್ ಹುಳಿಯಾರಿನಲ್ಲಿ ನೀಡಿದ ಹೇಳಿಕೆಗೆ ವರ್ಷಗಳೆ ಉರುಳಿದರೂ ನಮ್ಮಗಳ ಕೇಸು ಮಾತ್ರ ಹಿಂಪಡೆದಿಲ್ಲ. ರಾಜ್ಯ ರೈತ ಮುಖಂಡರ ನೇತೃತ್ವದಲ್ಲಿ ನಿಯೋಗ ತೆರಳಿ ಪ್ರಶ್ನಿಸಿದಾಗಲೂ ನಮ್ಮ ಕೇಸು ಹಿಂಪಡೆಯುವ ಭರವಸೆ ನೀಡಿದರೆ ವಿನಃ ನಮ್ಮ ಕೇಸುಗಳುನ್ನು ವಾಪಸ್ಸು ಪಡೆದಿಲ್ಲ. ಹಾಗಾಗಿ ಈಗಲೂ ನ್ಯಾಯಾಲಯಕ್ಕೆ ಅಲೆಯುವುದು ನಮಗೆ ತಪ್ಪಿಲ್ಲ ಎಂದು ಹುಳಿಯಾರು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಕಳೆದ ಸಂಪುಟ ಸಭೆಯಲ್ಲೂ ಕೂಡ ಈ ಬಗ್ಗೆ ತೀಮಾ೯ನವಾಗಿದ್ದು ರಾಜ್ಯದ ಎಲ್ಲಾ ರೈತರ ಕೇಸ್ ಗಳನ್ನು ವಾಪಸ್ಸು ಪಡೆಯುವುದಾಗಿ ಕಾನೂನು ಸಚಿವರು ಹೇಳಿಕೆ ನೀಡಿದ್ದು ಈ ಬಾರಿಯಾದರು ಕೋಟ್೯ಗೆ ಅಲೆಯುವುದು ತಪ್ಪಬಹುದೆಂಬ ನಿರೀಕ್ಷೆ ಮೊನ್ನೆ ಮತ್ತೊಮ್ಮೆ ರೈತರುಗಳು ಕೋಟ್೯ ಗೆ ಹಾಜರಾಗಿದ್ದರಿಂದ ಹುಸಿಯಾಗಿದೆ.ಇದರಿಂದಾಗಿ ಜಿಲ್ಲೆಯಲ್ಲಿ ದಾಖಲಾಗಿರುವ ರೈತರ ಮೊಕದ್ದಮೆಯನ್ನು ಸಕಾ೯ರದ ಗಮನಕ್ಕೆ ತರುವಲ್ಲಿ ಅಧಿಕಾರಿಗಳು ನಿಲ್ರ್ಯಕ್ಷ್ಯ ಮನೋಭಾವ ತಾಳಿದ್ದಾರೆಯೆ ಅಥವಾ ಮಾನ್ಯ ಮುಖ್ಯಮಂತ್ರಿಗಳೆ ಜೆಡಿಎಸ್ ಆಡಳಿತದಲ್ಲಿರುವ ತಾಲ್ಲೂಕಿನ ಬಗ್ಗೆ ಧೋರಣೆ ಅನುಸರಿಸುತ್ತಿದ್ದಾರೆಯೆ ಎಂಬುದು ಪ್ರಶ್ನೆಯಾಗಿದ್ದು ಒಟ್ಟಾರೆ ರೈತರ ಪ್ರಕರಣ ವಾಪಸ್ಸು ಪಡೆಯುವುದಾಗಿ ಹೇಳುತ್ತಾ ಬರಿಯ ಭರವಸೆಗಳಲ್ಲೆ ಕಾಲ ತಳ್ಳುತ್ತಿರುವುದು ರೈತರ ಆಕ್ರೋಷಕ್ಕೆ ಎಡೆಮಾಡಿಕೊಟ್ಟಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ