ಹುಳಿಯಾರು : ಪಟ್ಟಣ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯ ಆಚರಣೆ ಗರಿಗೆದರಿದ್ದು , ಬಗೆಬಗೆಯ ಅಡುಗೆಯ ಜೊತೆಗೆ ಎಳ್ಳು-ಸಕ್ಕರೆಅಚ್ಚು, ಎಳ್ಳು-ಬೆಲ್ಲದ ಕಂಪು ಹರಡಿದ್ದು ಕಂಡುಬಂತು.
ಹುಳಿಯಾರಿನಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಎಳ್ಳು ಬೀರುತ್ತಿರುವ ಬಾಲಕಿ
ಹಬ್ಬದ ಅಂಗವಾಗಿ ಕೆಲವರು ಮನೆಯಲ್ಲೇ ದೇವರಿಗೆ ಪೂಜೆ ಸಲ್ಲಿಸಿ, ಎಳ್ಳುಬೆಲ್ಲವನ್ನು ನೈವೇದ್ಯ ಮಾಡಿದರೆ, ಮತ್ತೆ ಕೆಲವರು ದೇವಸ್ಥಾನಗಳಿಗೆ ತೆರಳಿ ಎಳ್ಳುಬೆಲ್ಲವನ್ನು ಹಂಚಿ ಪೂಜೆ ಸಲ್ಲಿಸಿದರು.
ಹಬ್ಬದ ಅಂಗವಾಗಿ ಪಟ್ಟಣದ ಈಶ್ವರನ ದೇವಾಲಯ,ಆಂಜನೇಯಸ್ವಮಿ ದೇವಾಲಯ, ಗ್ರಾಮದೇವತೆ ಹುಳಿಯಾರಮ್ಮ,ದುರ್ಗಮ್ಮ ,ಕೆಂಚಮ್ಮನ ದೇವಾಲಯ ಹಾಗೂ ಬನಶಂಕರಿ ಸನ್ನಿಧಿಗೆ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಮಾಡಿಸುತ್ತಿದ್ದು ಕಂಡುಬಂತು.ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು.ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಸಕ್ಕರೆಅಚ್ಚು,ಕಬ್ಬು ಹಂಚುವ ವಾಡಿಕೆಯಿದ್ದು ಹೆಣ್ಣುಮಕ್ಕಳು ಬಗೆಬಗೆಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಎಳ್ಳು-ಬೆಲ್ಲ, ಕಬ್ಬನ್ನು ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಹಂಚುವ ಮೂಲಕ ಹಬ್ಬದ ಶುಭಾಷಯ ತಿಳಿಸುತ್ತಿದ್ದು ಸಾಮಾನ್ಯವಾಗಿತ್ತು.
ಬಣವೆಗೆ ಮುಳ್ಳು: ರೈತರ ಸುಗ್ಗಿಕಾಲದ ಆಚರಣೆ ವಿಶಿಷ್ಟವಾಗಿದ್ದು ಸಂಕ್ರಾಂತಿಯ ಮರುದಿನದಿಂದ ಕಣಗೆಲಸ ಮಾಡುವುದು ಹಿಂದಿನಿಂದ ಆಚರಣೆಯಲ್ಲಿದೆ. ಹಬ್ಬದ ಮುನ್ನಾ ದಿನ ರೈತರು ಕಣದ ಬದಿಯಲ್ಲಿನ ಹುಲ್ಲಿನ ಬಣವೆಗಳಿಗೆ ಎರದೆಮುಳ್ಳುಹಾಕಿಬಂದು ಹಬ್ಬದ ದಿನ ಪೂಜೆ ಸಲ್ಲಿಸಿಸುತ್ತಾರೆ. ಸಂಕ್ರಾಂತಿಯ ನಂತರ ಸೂರ್ಯ ತನ್ನ ಚಲನೆಯ ದಿಕ್ಕನ್ನು ಬದಲಾಯಿಸುವುದರಿಂದ ಬಿಸಿಲು ಹೆಚ್ಚಾಗಲಿದ್ದು, ಹಬ್ಬದ ನಂತರ ಕಣಗೆಲಸ ಮಾಡಲು ಸೂಕ್ತ ಸಮಯ ಎಂಬುದು ಈ ಆಚರಣೆ ಹಿಂದಿನ ನಂಬಿಕೆಯಾಗಿದೆ.
ನಾಗಪ್ಪನ ಪೂಜೆ : ಗ್ರಾಮೀಣ ಭಾಗದಲ್ಲಿ ಇದೇ ದಿನ ನಾಗರು ಆಚರಿಸುವ ಸಂಪ್ರದಾಯವಿದ್ದು, ಕಿಚುಡಿನಾಗರು, ಚಿಗಣಿತಮಟದ ನಾಗರು,ಮುದ್ದೆನಾಗರು ಆಚರಣೆಯಲ್ಲಿದೆ. ಹೋಬಳಿಯ ಲಿಂಗಪ್ಪನಪಾಳ್ಯ,ಕೋಡಿಪಾಳ್ಯ,ಕೆಂಕೆರೆ ಸುತ್ತಮುತ್ತಲಲ್ಲಿ ಸಂಕ್ರಾತಿ ಹಬ್ಬದ ದಿನ ಕೂಳೆ ನಾಗರು ಆಚರಣೆ ನಡೆದು ಕೊಂಡು ಬಂದಿದ್ದು ಮನೆಮಂದಿಯಲ್ಲಾ ಒಟ್ಟಾಗಿ ಸೇರಿ ನಾಗರಕಲ್ಲಿಗೆ ಹಾಲನ್ನೆರೆಯುವ ಮೂಲಕ ಹಬ್ಬದ ಆಚರಣೆ ಮಾಡಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ