ಬಸ್ ನಿಲ್ದಾಣದಲೆಲ್ಲಾ ಕಬ್ಬಿನ ರಾಶಿ
-------------------------
ಹುಳಿಯಾರು : ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬದ ಸ್ವಾಗತಿಸಲು ಜನತೆ ಸಿದ್ಧರಾಗಿದ್ದು ಪಟ್ಟಣದೆಲ್ಲೆಡೆ ಹಬ್ಬದ ಸಂಭ್ರಮ ಕಂಡುಬಂತು. ಹಬ್ಬಕ್ಕಾಗಿ ಗುರುವಾರದಂದು ಸಂತೆ ಹಾಗೂ ಬಸ್ ನಿಲ್ದಾಣದಲ್ಲಿ ಅವರೆಕಾಯಿ, ಕಬ್ಬು, ಗೆಣಸು, ಕಡಲೆಕಾಯಿ, ಹೂವು ಹಣ್ಣುಗಳ ವ್ಯಾಪಾರದ ಭರಾಟೆ ಜೋರಾಗಿತ್ತು. ರಸ್ತೆಯಲೆಲ್ಲಾ ಕಬ್ಬು,ಅವರೆ ಮಾರಾಟವಾಗುತ್ತಿದ್ದು ಕೊಳ್ಳುಗರಿಂದ ಗಿಜಿಗುಡುತ್ತಿತ್ತು.
ಎಳ್ಳು-ಬೆಲ್ಲ ತಯಾರಿ ಜೋರಾಗಿದ್ದು ಮನೆಗಳಲ್ಲಿ ಹೆಣ್ಣು ಮಕ್ಕಳು ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದರು.
ಬೆಲೆ ಏರಿಕೆ ನಡುವೆ ಸಹ ಗ್ರಾಹಕರು ಖರೀದಿ ನಡೆಸಿದ್ದು ಸಂಕ್ರಾಂತಿಗಾಗಿ ಹಿಂದಿನ ದಿನವೇ ರಾಶಿ ರಾಶಿ ಕಬ್ಬು ಬಂದಿದೆ. ಕಬ್ಬು ಪ್ರತಿ ಜಲ್ಲೆಗೆ 20-30 ರೂ.ವರೆಗಿದ್ದರೆ,ಗೆಣಸಿಗೆ ಕೆಜಿ ೪೦ ರೂ ,ಅವರೆಕಾಯಿ ಕೆಜಿಗೆ 25-30 ರೂ ನಂತೆ ಮಾರಾಟ ನಡೆಯಿತು.
ಹುಳಿಯಾರು ಬಸ್ ನಿಲ್ದಾಣದಲ್ಲಿ ಸಂಕ್ರಾಂತಿ ಹಬ್ಬಕ್ಕೆ ರಾಶಿರಾಶಿ ಕಬ್ಬು ತಂದು ವ್ಯಾಪಾರದಲ್ಲಿ ತೊಡಗಿರುವ ವರ್ತಕರು. |
ಕಡಲೆಕಾಯಿ ಒಂದು ಸೇರಿಗೆ 30 ರೂ.ನಂತೆ ಮಾರಾಟವಾದರೆ ಎಳ್ಳು-ಬೆಲ್ಲ ೧೫೦ ರೂ.ನಿಂದ ೨೦೦ ರೂ.ವರೆಗೆ ಹಾಗೂ ಸಕ್ಕರೆ ಅಚ್ಚು ಕೆ.ಜಿ.ಗೆ 200 ರೂ.ವರೆಗೆ ಮಾರಾಟವಾಗುತ್ತಿತ್ತು.
ಹೂವು ದುಬಾರಿ:ಎಲ್ಲ ಬಗೆಯ ಹೂವಿನ ಬೆಲೆಗಳೂ ಗಗನಕ್ಕೇರಿವೆ.ಚಳಿಗಾಲವಾದ್ದರಿಂದ ಉತ್ತಮ ಹೂವು ಬರುವುದು ಕಡಿಮೆ.ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಕಾಕಡ ಮಾರಿಗೆ 30 ಚೆಂಡುಹೂವು ಕೆಜಿಗೆ 80 ರೂ.ನಂತೆ ಮಾರಾಟವಾಗುತ್ತಿದೆ.ಕನಕಾಂಬರ 30-40, ಶಾವಂತಿಗೆ 50ರೂ ಯಿದ್ದು ಗುಣಮಟ್ಟವಿಲ್ಲದೆ ಹೂವಿಗೆ ಈ ಬೆಲೆ ದುಬಾರಿ ಎನ್ನುವಂತಾಗಿದೆ.
ಸದ್ಯಕ್ಕೆ ಹಣ್ಣಿನ ದರಗಳ ತುಸು ಕಡಿಮೆಯಿದ್ದು ಮಂಡಿಗಳಲ್ಲಿ ಬಾಳೆಹಣ್ಣು ಗೊನೆಲೆಖ್ಖದಲ್ಲಿ ಕೊಂಡಲ್ಲಿ ಪುಟ್ಟಬಾಳೆ ಕೆಜಿಗೆ ೩೦ ಹಾಗೂ ಪಚ್ಚಬಾಳೆ ಕೆಜಿಗೆ ೧೦ ರೂನಂತೆ ಮಾರಾಟಮಾಡುತ್ತಿದ್ದಾರೆ
ಹಣ್ಣಿನ ದರ ತುಸು ಇಳಿಕೆಯಾಗಿದ್ದು ಅಂಗಡಿ ತುಂಬಾ ಹಣ್ಣು ಜೋಡಿಸಿಕೊಂಡೂ ಗಿರಾಕಿ ಎದುರುನೋಡುತ್ತಿರುವ ವ್ಯಾಪಾರಿ |
ಕಿತ್ತಳೆಹಣ್ಣು ಕೆಜಿಗೆ ೩೦ ರೂಯಿದ್ದರೆ ದಾಳಿಂಬೆ 1೦೦ ರೂ.ಬೆಲೆಯಿದೆ.
ಒಟ್ಟಾರೆ ಬೆಲೆ ಎಷ್ಟೆಯಿದ್ದರೂ ಕೊಳ್ಳುವ ಸಂಭ್ರಮ ಕಡಿಮೆಯಿಲ್ಲದೆ ವಹಿವಾಟು ನಡೆಯಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ