ವಿಷಯಕ್ಕೆ ಹೋಗಿ

ಹುಳಿಯಾರು ವ್ಯಾಪ್ತಿಯಲ್ಲಿ ಭಾರಿ ಮಳೆ ತುಂಬಿ ಹರಿದ ಕೆರೆ,ಕಟ್ಟೆ,ತೋಟಗಳು

ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಬಿಟ್ಟುಬಿಡದೆ ಬರುತ್ತಿದ್ದ ಮಳೆ ಹಾಗೂ ಭಾನುವಾರ ಸಂಜೆಯಿಂದ ಸೋಮವಾರ ಮುಂಜಾನೆವರೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಕಳೆದ ಐದಾರು ವರ್ಷಗಳಿಂದ ತುಂಬಿರದ ಕೆರೆ, ಕಟ್ಟೆ, ಪಿಕಫ್ ಗಳು, ತೋಟ-ತುಡಿಕೆಗಳೆಲ್ಲಾ ತುಂಬಿ ಹರಿದಿದ್ದು ರೈತರಲ್ಲಿ ಸಂತಸವನ್ನುಂಟು ಮಾಡಿದೆ.

ಬಳ್ಳೆಕಟ್ಟೆ ಸೇತುವೆ ಬಳಿ ಬೋರನಕಣಿವೆ ಜಲಾಶಯಕ್ಕೆ ಹರಿದು ಹೋಗುತ್ತಿರುವ ನೀರು.

ಸ್ವಾತಿ ಮಳೆ ಕಳೆದ ಎರಡು ಮೂರದಿನದಿಂದ ಬರುತ್ತಲೇ ಇತ್ತು ಆದರೆ ಭಾನುವಾರ ಸಂಜೆಯಿಂದ ಪ್ರಾರಂಭವಾದ ಮಳೆ ಎಡಬಿಡದೆ ರಾತ್ರಿ ಪೂರ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲು ನೆರವಾಗಿದೆ.
ಹುಳಿಯಾರಿನ ಅಪ್ಪಸಾಬಿ ಅಣೆ ಕೋಡಿ ಬಿದ್ದು ಹರಿಯುತ್ತಿರುವುದು
ಅಪ್ಪಸಾಬಿ ಅಣೆ : ಪಟ್ಟಣಕ್ಕೆ ಹೊಂದಿಕೊಂಡಿರುವ ಅಪ್ಪಸಾಬಿ ಅಣೆ ನಾಲ್ಕು ವರ್ಷದ ನಂತರ ಭಾನುವಾರ ರಾತ್ರಿ ಮಳೆಗೆ ಕೋಡಿಬಿದಿದ್ದು ಮುಂಜಾನೆಯಿಂದ ಇದನ್ನು ನೋಡಲು ಜನಜಾತ್ರಯೇ ಉಂಟಾಗಿದೆ. ಈ ಅಣೆ ತುಂಬ ಬೇಕೆಂದರೆ ಸಮೀಪದ ತಿರುಮಲಾಪುರ ಕೆರೆ ಕೋಡಿಬಿದ್ದು ಅಲ್ಲಿಂದ ಹರಿಯುವ ನೀರಿನಿಂದ ಈ ಅಣೆಗೆ ನೀರು ಶೇಖರಣೆಯಾಗುತ್ತಿತ್ತು. ಈಗ ತಿರುಮಲಾಪುರ ಕೆರೆ ಕೋಡಿ ಬೀಳದಿದ್ದರೂ ಸಹ ಸುತ್ತಮುತ್ತಲ ಹೊಲಗಳ ಭಾಗದ ಹರಿವಿನಿಂದಾಗಿ ಈಅಣೆ ಕೋಡಿ ಬಿದ್ದಿದೆ. ಕೋಡಿ ನೀರಿನಲ್ಲಿ ಮಹಿಳೆಯರು, ಯುವಕರೆನ್ನದೆ ಆಟವಾಡುತ್ತಿದ್ದು . ಈ ಕೋಡಿ ನೀರು ಮುಂದೆ ಹರಿದು ಬೋರನಕಣಿವೆ ಸೇರಲಿದೆ.
ದೊಡ್ಡಬಿದರೆ ಕೆರೆ : ಹೋಬಳಿಯ ದೊಡ್ಡಬಿದರೆ ಕೆರೆಗೆ ಕಳೆದ ಮೂರ್ನಾಲ್ಕು ದಿನದ ಹಿಂದೆ ಬಂದ ಮಳೆಗೆ ಕೆರೆಯ ಗುಂಡಿಗಳು ತುಂಬಿದ್ದವು ಆದರೆ
ಭಾನುವಾರ ರಾತ್ರಿ ಬಂದ ಮಳೆಯಿಂದಾಗಿ ಈ ಕೆರೆಯು ಕೋಡಿಬಿದ್ದಿರುವುದು ಗ್ರಾಮಸ್ಥರಲ್ಲಿ ಸಂತಸ ಹಾಗೂ ರೈತರಲ್ಲಿ ಭತ್ತ ಬೆಳೆಯುವ ಕನಸನ್ನು ಬಿತ್ತಿದೆ. ಕೆರೆ ಕೋಡಿ ಬಿದ್ದಿದನ್ನ ಕಂಡ ಮಹಿಳೆಯರು ಕೆರೆಗೆ ಗಂಗಮ್ಮನ ಪೂಜೆ ಸಹ ಮಾಡಿದ್ದು, ಕೋಡಿ ಮುಖಾಂತರ ಹೊರಹೋಗುವ ನೀರು ಪೋಚಕಟ್ಟೆ ಕೆರೆ ಮುಖಾಂತರ ಬೋರನಕಣಿವೆಗೆ ತಲುಪಲಿದೆ.
ಮಳೆಯಿಂದಾಗಿ ಅವಳಗೆರೆ ಕೆರೆ, ಭೈರಾಪುರ ಕೆರೆ, ದೊಡ್ಡಬಿದರೆ ಕೆರೆ, ಪೋಚಗಟ್ಟೆಕೆರೆ, ಅಪ್ಪಸಾಬಿ ಅಣೆ , ಬಿದರೆಹೊಳೆಯಲ್ಲಾ ತುಂಬಿದ್ದು ಭೀಮಮ್ಮನ ಗುಡಿ ಎದುರಿನ ರಸ್ತೆಯ ಮೇಲೆ ಅಡ್ಡಲಾಗಿ ಸೋಮವಾರ ಬೆಳಿಗ್ಗಿನಿಂದ ಸಂಜೆಯವರೂ ನೀರು ಹರಿಯುತ್ತಿದ್ದು, ನೀರೆಲ್ಲಾ ಬೋರನಕಣಿವೆ ಜಲಾಶಯ ಸೇರಲಿದೆ.
ಬೋರನಕಣಿವೆಗೆ ನೀರು : ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಿಲ್ಲದೆ ಬರಿದಾಗಿದ್ದ ಬೋರನಕಣಿವೆ ಜಲಾಶಯಕ್ಕೆ ಈಗ ಐದಾರು ಅಡಿಯಷ್ಟು ನೀರು ಶೇಖರಣೆಯಾಗಿದೆ. ಕೋಡಿ ಬಿದ್ದು ನೀರು ಹರಿದ ಪರಿಣಾಮ ಹಾಗೂ ಪಿಕಫ್‍ಗಳೆಲ್ಲಾ ತುಂಬಿದ್ದರಿಂದ ಹೆಚ್ಚಿನ ಪ್ರಮಾಣದ ನೀರು ಡ್ಯಾಂನತ್ತ ಬಂದು ಸಂಗ್ರಹಣೆಯಾಗಿದೆ.
ಒಟ್ಟಾರೆ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಐದಾರು ವರ್ಷಗಳಿಂದ ಕಂಡಿರದಂತ ಮಳೆಯಾಗಿದ್ದು , ನೀರಿಲ್ಲದೆ ಸುಳಿಯಲ್ಲಾ ಒಣಗಿ ಹೋಗಿದ್ದ ತೆಂಗಿಗೆ ಹೆಚ್ಚಿನ ಅನುಕೂಲವಾಗಿದೆ. ಕೆರೆಗಳಲ್ಲಿ ನೀರಿಲ್ಲದೆ ಅಂತರ್ಜಲವೆಲ್ಲಾ ಬತ್ತಿ, ಬೋರ್ ಗಳೆಲ್ಲಾ ನಿಂತುಹೋಗಿದ್ದವು, ಈಗ ಕೆರೆಕಟ್ಟೆ ತುಂಬಿರುವುದರಿಂದ ಕೊಳವೆಬಾವಿಯಲ್ಲಿ ಪುನ: ನೀರು ಬರುತ್ತವೆ ಎಂಬ ಅಶಾಭಾವನೆ ರೈತರಲ್ಲಿ ಮೂಡಿದೆ. ಹುಳಿಯಾರಿಗೆ ಕುಡಿಯುವ ನೀರು ಬೋರನಕಣಿವೆಯಿಂದ ಸರಬರಾಜಾಗುತ್ತಿದ್ದು ಬೋರನಕಣಿವೆ ತುಂಬಿದಲ್ಲಿ ಮುಂದಿನ ಐದಾರು ವರ್ಷ ಪಟ್ಟಣದ ನೀರಿನ ಸಮಸ್ಯೆ ತೀರಲಿದೆ ಎಂಬ ಸಂತಸ ಪಟ್ಟಣಿಗರಲ್ಲಿ ಮನೆ ಮಾಡಿದರೆ, ಮೀನುಗಾರಿಕೆ ನಡೆಸಬಹುದು ಎಂಬುದು ಜಯಚಂದ್ರನಗರ ನಿವಾಸಿಗಳ ನಂಬಿಕೆಯಾಗಿದೆ.
 ಹುಳಿಯಾರು ಸಮೀಪದ ಭೀಮಮ್ಮನ ಗುಡಿ ಎದುರಿನ ಹುಳಿಯಾರು-ಶಿರಾ ರಸ್ತೆಯಲ್ಲಿ ಸೊಮಜ್ಜನಪಾಳ್ಯದ ಕಡೆಯಿಂದ ಬರುತ್ತಿರುವ ನೀರು ಹರಿಯುತ್ತಿದ್ದು ಆ ನೀರ ನಡುವೆಯೇ ವಾಹನಗಳು ಚಲಿಸುತ್ತಿದ್ದವು.
ಮುಂಗಾರಲ್ಲಿ ರೈತರ ಕೈಹಿಡಿಯಬೇಕಾಗಿದ್ದ ಮಳೆಗಳು ಬಾರದೆ ರೈತರನ್ನು ಕಂಗಾಲಾಗುವಂತೆ ಮಾಡಿದ್ದವು. ಆದರೆ ಹಿಂಗಾರಿನ ಮೊದಲಲ್ಲಿ ಬರುವ, ಹೆಚ್ಚಿನ ನೀರು ಶೇಖರಣೆಗೆ ಕಾರಣವಾಗುವ ಮಳೆಗಳು ಸಹ ತಕ್ಕಮಟ್ಟಿಗೆ ಬಾರದೆಯಿದ್ದು ರೈತರಲ್ಲಿ ಈ ವರ್ಷವೂ ಬರಗಾಲ ಆವರಿಸಿ ಕುಡಿಯಲು,ಜಾನುವಾರುಗಳಿಗೆ ನೀರಿಲ್ಲದಂತಾಗುತ್ತದೆ ಎಂಬ ಪ್ರಶ್ನೆ ಮೂಡುವಂತೆ ಮಾಡಿತ್ತು. ಇದೀಗ ಸ್ವಾತಿ ಮಳೆ ಉತ್ತಮವಾಗಿ ಬಂದಿರುವುದು ರೈತರಲ್ಲಿ ಮೂಡಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಸುರಿದಿದ್ದು, ಈ ವರ್ಷ ನೆಮ್ಮದಿಯಿಂದಿರಬಹುದು ಎಂಬ ಭರವಸೆ ಮೂಡಿಸಿದೆ.
-------
ಈ ಸಲದ ಸ್ವಾತಿಮಳೆ ಚೆನ್ನಾಗಿ ಬಂದಿದ್ದು , ಹೊಲ,ತೋಟ-ತುಡಿಕೆಗಳೆಲ್ಲಾ ತುಂಬಿ ತೋಟ-ಹೊಲದಲ್ಲಿ ಓಡಾಡಲು ಆಗುತ್ತಿಲ್ಲ ಭೂಮಿ ಚೆನ್ನಾಗಿ ನೀರು ಕುಡಿದಿದ್ದು ಕಾಲಿಳಿಯುವಂತಾಗಿದೆ. ಈ ಹಿಂಗಾರುಮಳೆ ರಾಗಿ ಬಿತ್ತಿದಾಗಲೇ ಬಂದಿದ್ದರೆ ರಾಗಿ ಹೆಚ್ಚಿನ ಪ್ರಮಾಣದಲ್ಲಾಗುತ್ತಿತ್ತು : ಸೋಮಶೇಖರಯ್ಯ ರೈತ.
----------

ಭಾನುವಾರ ಸುರಿದ ಮಳೆಯಿಂದ ತೋಟ,ಕೆರೆಗಳೆಲ್ಲಾ ತುಂಬಿ ಕೋಡಿ ಬಿದ್ದಿದ್ದು, ನೀರಿಲ್ಲದೆ ಸೊರಗಿದ್ದ ತೆಂಗಿಗೆ ನೆರವಾದಂತಾಗಿದ್ದು, ಮುಂದಿನ ಮಳೆಗಳು ಸಹ ಇದೇ ರೀತಿ ಬಂದರೆ ಇನ್ನೂ ಉತ್ತಮ : ರಮೇಶ್ , ದೊಡ್ಡಬಿದರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...