ಲಾರಿಯಲ್ಲಿ ಊಟದ ಬುತ್ತಿ ಸಮೇತ ಹಾಜರಾದ ರೈತರು: ಸ್ವಾಮೀಜಿಗಳ ಸಾನಿಧ್ಯ
ಹುಳಿಯಾರು:ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ಕಳೆದ ೨೭ ದಿನಗಳಿಂದಲೂ ನಡೆಯುತ್ತಿರುವ ರೈತರ ಚಳುವಳಿ ಬಗ್ಗೆ ರಾಜ್ಯಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಗ್ರಾಮಸ್ಥರು ಗುರುವಾರದಂದು ಹುಳಿಯಾರಿಗೆ ಲಾರಿಯಲ್ಲಿ ಬುತ್ತಿ ಸಮೇತ ಆಗಮಿಸಿ ರಾಂಗೋಪಾಲ್ ಮುಂಭಾಗ ರಸ್ತೆ ತಡೆ ನಡೆಸಿ ಧರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸಿದರು.
ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕೊಬ್ಬರಿ ಬೆಳಗಾರರ ೨೮ ನೇ ದಿನದ ಪ್ರತಿಭಟನೆಯಲ್ಲಿ ಅರಸಿಕೆರೆ ತಾಲ್ಲೂಕಿನ ಮಾಡಾಳು ನಿರಂಜನ ಪೀಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಪಾಲ್ಗೊಂಡ ಹಾಲ್ಕುರಿಕೆ ಗ್ರಾಮದ ನೂರಕ್ಕೂ ಹೆಚ್ಚು ಗ್ರಾಮಸ್ಥರು ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ನಂತರ ಮಾತನಾಡಿದ ಹರಿಸಮುದ್ರದ ನಾಗರಾಜ್ ಹಿಂದೊಂದು ಕಾಲದಲ್ಲಿ ಕಲ್ಪತರು ನಾಡಿನ ಕೊಬ್ಬರಿಗೆ ಬಂಗಾರದ ಬೆಲೆಯಿತ್ತು.ಇಂದು ಬಂಗಾರ ೩೦ ಸಾವಿರಕ್ಕೇರಿದರೆ ಕೊಬ್ಬರಿ ೬ ಸಾವಿರಕ್ಕಿಳಿದಿದೆ.ತೆಂಗು ಈ ಭಾಗದ ಜೀವನಾಧಾರವಾಗಿದ್ದು ಕಳೆದ ವರ್ಷ ೧೮ ಸಾವಿರವಿದ್ದ ಕೊಬ್ಬರಿ ಬೆಲೆ ದಿನೇ ದಿನೇ ಕುಸಿತ ಕಾಣುತ್ತಾ ಇಂದು ೬ ಸಾವಿರಕ್ಕಿಳಿದು ರೈತರನ್ನು ಸಾವಿನ ದವಡೆಗೆ ದೂಕಿದೆ.ನಮ್ಮ ಕೊಬ್ಬರಿಗೆ ಬೆಂಬಲ ಬೆಲೆ ಕೊಡಿ ಎಂದು ಸರ್ಕಾರವನ್ನು ಅಂಗಲಾಚುವ ಸ್ಥಿತಿ ಬಂದಿದೆ.ರೈತಪರ ಸರ್ಕಾರವೆಂದು ಅಧಿಕಾರಕ್ಕೆ ಬರುವ ಸರ್ಕಾರಗಳು ನಂತರ ರೈತರ ಬೆನ್ನಿಗೆ ನಿಲ್ಲುತ್ತಿಲ್ಲ ಎಂದರು.
ಯಡಿಯೂರಪ್ಪನವರು ತಿಪಟೂರಿಗೆ ತೆಂಗು ಸಂಸ್ಕರಣ ಘಟಕವನ್ನು ಮಂಜೂರು ಮಾಡಿದ್ದನ್ನು ಮುಂದಿನ ಜನಪ್ರತಿನಿಧಿಗಳು ಯೋಜನೆಯ ಬಗ್ಗೆ ಪೂರಾ ನಿರ್ಲಕ್ಷ್ಯವಹಿಸಿದ್ದರಿಂದ ತೆಂಗಿನ ಉಪಉತ್ಪನ್ನಗಳ ಘಟಕ ಹಳ್ಳಹಿಡಿಯಿತು ಎಂದರು.
ಸಾನಿಧ್ಯ ವಹಿಸಿದ್ದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸರ್ಕಾರವೂ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.ದಿನೇದಿನೇ ಹೋರಾಟ ತೀವ್ರವಾಗುತ್ತಿದ್ದು ಮತ್ತಷ್ಟು ಪ್ರಬಲವಾಗುವುದನ್ನು ತಡೆಯಲು ರೈತರ ಬೇಡಿಕೆ ಈಡೇರಿಸಲು ಕೂಡಲೇ ಮುಂದಾಗಬೇಕು.ಅಸಂಬದ್ಧ ವಿಚಾರಗಳನ್ನು ದಿನಗಟ್ಟಲೇ ಬಿತ್ತರಮಾಡುವ ಮಾಧ್ಯಮದವರು ರೈತರ ಸಮಸ್ಯೆಗಳಿಗೆ ಕನ್ನಡಿಯಾಗಬೇಕೆಂದರು.
ರಾಜ್ಯ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ ಇಂದಿಗೆ ಧರಣಿ ೨೮ ದಿನವಾಗಿದ್ದು ಕೂಗಳತೆ ದೂರದಲ್ಲಿರುವ ಶಾಸಕರು ಸೇರಿದಂತೆ ನಮ್ಮ ಜಿಲ್ಲೆಯಲ್ಲಿಯೆ ಕೊಬ್ಬರಿ ಬೆಳೆಯುವ ಸ್ಥಳದ ೧೦ ಜನ ಶಾಸಕರಿದ್ದು ಸಹ ಇತ್ತ ಯಾರೊಬ್ಬರೂ ಕೊಬ್ಬರಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.ಸಂಸದ ಮುದ್ಧಹನುಮೇಗೌಡರ ನೇತೃತ್ವದಲ್ಲಿ ಜಿಲ್ಲೆಯ ರೈತರುಗಳು ಜನವರಿಯಲ್ಲಿ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೊಬ್ಬರಿಗೆ ಕನಿಷ್ಠ ೧೫ ಸಾವಿರ ಬೆಲೆ ತೀರ್ಮಾನವಾಗುವವರೆಗೂ ಚಳುವಳಿ ಕೈಬಿಡುವ ಮಾತೇಯಿಲ್ಲ ಎಂದರು.
ಜಿಲ್ಲಾಧ್ಯಕ್ಷ ಶಂಕರಪ್ಪ,ತಾಲ್ಲೂಕ್ ಉಪಾಧ್ಯಕ್ಷ ಮಲ್ಲೀಕಣ್ಣ,ಹಾಲ್ಕುರಿಕೆ ನಾಗರಾಜು ಮಾತನಾಡಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಕುಮಾರಸ್ವಾಮಿ,ನಂಜುಂಡಪ್ಪ,ಹುಚ್ಚೀರೆ ಗೌಡರು,ಮಾಯಗೊಂಡನಹಳ್ಳಿ ರಾಮಣ್ಣ,ಹಾಲೇನಹಳ್ಳಿ ಸುರೇಶ್,ಮಲ್ಲಿಕಣ್ಣ,ನಾಗರಾಜು,ಪಟ್ರೆಹಳ್ಳಿ ಪುಟ್ಟಣ್ಣ,ಹಂಗಾಲಿ ಕುಮಾರಣ್ಣ,ಪರಮೇಶ್,ನಾಗಭೂಷಣ,ಷಡಾಕ್ಷರಿ ಮೊದಲಾದವರು ಪಾಲ್ಗೊಂಡಿದ್ದರು.
-----------------------------------------------------------------
ಮೊಬೈಲ್ ನಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ಸಚಿವರನ್ನು ಕೈ ಬಿಡಿ ಎಂದು ಅಧಿವೇಶನದಲ್ಲಿ ಎಲ್ಲಾ ಪಕ್ಷದವರು ವಾರಗಟ್ಟಲೇ ಚರ್ಚಿಸಿ ಕಲಾಪ ಹಾಳುಗೆಡವಿದರೆ ವಿನಹ ಯಾರೊಬ್ಬರು ಅನ್ನದಾತ ರೈತನ ಬಗ್ಗೆ ಪ್ರಶ್ನೆಯೇ ಎತ್ತಲಿಲ್ಲ.ಅಧಿವೇಶನದಲ್ಲಿ ರೈತರ ಸಮಸ್ಯೆ ಆಲಿಸುವ ಬದಲು ರೈತರನ್ನು ಬಂಧಿಸಿದ್ದೆ ಇವರ ಸಾಧನೆ : ಹಾಲ್ಕುರಿಕೆ ನಾಗರಾಜು ,ಗ್ರಾಪಂ ಮಾಜಿ ಅಧ್ಯಕ್ಷ
-------------------------------------------------
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ