ವಿಷಯಕ್ಕೆ ಹೋಗಿ

ರಾಗಿ ಬಿತ್ತನೆ ಕುಂಠಿತ : ಮಳೆಯ ಆಶಾಭಾವನೆಯಲ್ಲಿ ರೈತ

           ಹುಳಿಯಾರು  ಹೋಬಳಿಯಲ್ಲಿ ರಾಗಿ ಸಾಂಪ್ರದಾಯಿಕ ಬೆಳೆಯಾಗಿದ್ದು , ಬಹುತೇಕ ರೈತರಿಗೆ ಇದೇ ಜೀವನಾಧಾರವಾಗಿದ್ದು ಮಳೆಯ ಅಭಾವದಿಂದಾಗಿ ಶೇ.38 ರಷ್ಟು ಪ್ರದೇಶದಲ್ಲಿ ಮಾತ್ರ ರಾಗಿ ಬಿತ್ತನೆಯಾಗಿರುವುದು ಆತಂಕದ ಸಂಗತಿಯಾಗಿದೆ. ರೈತರಲ್ಲಿ ಬಿತ್ತನೆಯ ಉತ್ಸಾವೂ ಇಲ್ಲದೆ ಮಳೆಗಾಗಿ ಕಾದುಕೂರುವಂತ ಚಿಂತಾಜನಕ ಸ್ಥಿತಿಯಲ್ಲಿ ನೇಗಿಲಯೋಗಿ ಪರಿತಪಿಸುತ್ತಿದ್ದಾನೆ.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊಲವೊಂದರಲ್ಲಿ ಸಾಲು ಸಡ್ಡೆ ಮೂಲಕ ರಾಗಿ ಬಿತ್ತನೆಯಲ್ಲಿ ತೊಡಗಿರುವ ರೈತ.
              ಸಹಜವಾಗಿ ಜುಲೈ ತಿಂಗಳಿನಿಂದ ಪ್ರಾರಂಭವಾಗುವ ಹಿಂಗಾರು ಆಗಸ್ಟ್ ಅಂತ್ಯದೊಳಗೆ ಹೆಚ್ಚು ಬಿತ್ತನೆಯಾಗಬೇಕು. ಆದರೆ ಹೋಬಳಿ ವ್ಯಾಪ್ತಿಯಲ್ಲಿ ಸಕಾಲದಲ್ಲಿ ಮಳೆಯಾಗದೆ ಹೋಗಿದ್ದರಿಂದ ಆಗಸ್ಟ್ ಅರ್ಧ ತಿಂಗಳು ಕಳೆದರೂ ಸಹ ಅರ್ಧದಷ್ಟು ಸಹ ರಾಗಿ ಬಿತ್ತನೆಯಾಗಿಲ್ಲ. ಕೆಲ ಭಾಗದಲ್ಲಿ ಚದುರಿದ ತುಂತುರು ಮಳೆಯಾಗಿದ್ದರಿಂದ ಆ ಭಾಗದ ರೈತರು ರಾಗಿ ಬಿತ್ತಿದ್ದರೆ , ಇನ್ನುಳಿದ ಭಾಗದಲ್ಲಿ ಹೊಲ ಹದಮಾಡಿಕೊಂಡು ರಾಗಿ ಬಿತ್ತನೆಗೆ ಕಾಯುತ್ತಿದ್ದಾರೆ.
               ಕಳೆದ ಪೂರ್ವಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿ ರೈತರಲ್ಲಿ ಉತ್ಸಾಹ ತುಂಬಿದ್ದ ಮಳೆ ನಂತರ ದಿನಗಳಲ್ಲಿ ಕೈಕೊಟ್ಟಿದ್ದರಿಂದ ಕೆಲಭಾಗಗಳಲ್ಲಿ ಮಾತ್ರ ಅಲ್ಪಸ್ವಲ್ಪ ಹೆಸರು ಬೆಳೆಯಾಗಿ ಉಳಿದಂತೆ ಬಿತ್ತಿದ ಬೀಜವೂ ಸಹ ದೊರೆಯದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನಷ್ಟ ಅನುಭವಿಸಿದ ರೈತ ಮುಂಗಾರು ಕೈಹಿಡಿಯಲಿಲ್ಲವಾದರೂ ಹಿಂಗಾರಾದರೂ ಕೈಹಿಡಿಯುತ್ತದೆ ಎಂಬ ಆಶಾಭಾವನೆಯಿಂದ ರೈತರು ಬಿತ್ತನೆಯಲ್ಲಿ ತೊಡಗಿದ್ದರೂ ಸಹ ಹೆಚ್ಚಿನ ಉತ್ಸಾಹ ಕಂಡುಬರುತ್ತಿಲ್ಲ.
        ಬಿತ್ತನೆ : ಹುಳಿಯಾರು,ಕೆಂಕೆರೆ,ಕೋರಗೆರೆ,ಯಳನಡು,ಬರಕನಹಾಳ್, ದೊಡ್ಡಬಿದರೆ, ಗಾಣಧಾಳು, ಹೊಯ್ಸಲಕಟ್ಟೆ, ತಿರುಮಲಾಪುರ,ದಸೂಡಿ ಭಾಗದ ಗ್ರಾಮಗಳು ರಾಗಿ ಬಿತ್ತನೆ ಪ್ರದೇಶಗಳಾಗಿವೆ. ಇದುವರೆಗೆ ತಿಮ್ಲಾಪುರ,ಕೋರಗೆರೆ, ದೊಡ್ಡಬಿದರೆ ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆಯಾಗಿದ್ದರೆ, ಯಳನಡು ,ಕೆಂಕೆರೆ ಗ್ರಾ.ಪಂ.ಯ ಹಳ್ಳಿಗಳಲ್ಲಿ ಭಾಗಶಃ ಬಿತ್ತನೆಯಾಗಿದೆ. ಇನ್ನುಳಿದ ಭಾಗಗಳ ರೈತರು ಹೊಲಗಳನ್ನು ಹದಮಾಡಿಕೊಂಡು ಮಳೆ ಎದುರು ನೋಡುತ್ತಿದ್ದಾರೆ.
         ಪ್ರಗತಿ : ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 9500 ಹೆಕ್ಟೇರ್ ರಾಗಿ ಬಿತ್ತನೆ ಪ್ರದೇಶವಿದ್ದು ಅದರಲ್ಲಿ ರಾಗಿ 3635 ಹೆಕ್ಟೇರ್, ಅವರೆ 140 ಹೆಕ್ಟೇರ್, ಜೋಳ 40 ಹೆಕ್ಟೇರ್, ಹುಚ್ಚೆಳ್ಳು 24 ಹೆಕ್ಟೇರ್, ತೊಗರಿ 135 ಹೆಕ್ಟೇರ್,ಸಾಮೆ 12 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ. ಇನ್ನೂ ಅರ್ಧಕ್ಕೂ ಹೆಚ್ಚಿನ ಭಾಗದಲ್ಲಿ ಬಿತ್ತನೆಯಾಗಬೇಕಿದೆ.
         ಪ್ರೋತ್ಸಾಹ : ಕೃಷಿ ಇಲಾಖೆ ವತಿಯಿಂದ ಹೋಬಳಿಯ ಕೆಲ ಗ್ರಾಮಗಳಲ್ಲಿ ರಾಗಿ,ನವಣೆ , ಜಿಪ್ಸಂ,ಬೋರೆಕ್ಸ್ ನಂತಹ ಲಘುಪೋಷಕಾಂಷಗಳನ್ನು ಉಚಿತವಾಗಿ ನೀಡುವ ಮೂಲಕ ಬಿತ್ತನೆಗೆ ಪ್ರೋತ್ಸಾಹ ನೀಡಿದ್ದರೂ ಸಹ ಮಳೆಯಾಗದೆ ಪ್ರಯೋಜನವಾಗಲಿಲ್ಲ.
          ಕುಂಠಿತ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆಯಲ್ಲಿ ಸಾಕಷ್ಟು ಕ್ಷೀಣಿಸಿರುವುದಲ್ಲದೆ, ಸರಿಯಾಗಿ ಮಳೆಯಾಗಿರದ ಕಾರಣ ರಾಗಿ ಕೊಳ್ಳಲು ಸಹ ರೈತರು ಮುಂದಾಗದೆ ಸುಮ್ಮನಿದ್ದಾರೆ. ಹಿಂಗಾರು ಬಿತ್ತನೆ ಸೆಪ್ಟಂಬರ್ ಅಂತ್ಯದವರೆಗೂ ಇರುತ್ತದಾರೂ ರಾಗಿ ಬಿತ್ತನೆಗೆ ಜುಲೈ-ಆಗಸ್ಟ್ ತಿಂಗಳು ಸೂಕ್ತವಾಗಿದ್ದು ಈ ಸಮಯದಲ್ಲಿ ಬಿತ್ತನೆಯಾದರೆ ಮಾತ್ರ ಉತ್ತಮ ಇಳುವರಿ ಸಾಧ್ಯವಾಗುತ್ತದೆ . ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ರೈತರು ರಾಗಿ ಬದಲು ಜೋಳ, ಹುರುಳಿ ಬಿತ್ತನೆ ಕಡೆ ವಾಲುತ್ತಾರೆ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ನೂರುಲ್ಲಾ.

           ನೆನ್ನೆಯಿಂದ ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಸೂಚನೆ ಕಾಣುತ್ತಿದ್ದು ಅಲ್ಲಲ್ಲಿ ಬಿದ್ದ ಮಳೆಯಿಂದ ಈಗಾಗಲೇ ಬಿತ್ತಿದ್ದ ರಾಗಿಗೆ ಜೀವಬಂದಂತಾಗಿದ್ದು, ಮೊಳಕೆಗೆ ಸಹಕಾರಿಯಾಗಲಿದೆ. ರಾಗಿ ಬಿತ್ತಿದ್ದ ರೈತರು ಗೊಬ್ಬರ ಹಾಕಲು ಮುಂದಾಗಿದ್ದರೆ , ಇನ್ನೂ ಬಿತ್ತನೆ ಮಾಡದ ರೈತರು ಬಿತ್ತನೆಗೆ ಮುಂದಾಗಿದ್ದು ಕಂಡು ಬಂತು.

ಬಿದಿದ್ದ ಸೋನೆ ಮಳೆಗೆ ರಾಗಿ ಏನೋ ಬಿತ್ತಿದ್ದೆವೂ , ಬಿತ್ತಿದ ಮೇಲೆ ಮಳೇನೆ ಆಗಿಲ್ಲ , ಭೂಮಿಗೆ ಬಿದ್ದ ರಾಗಿಗೆ ನೀರಿನಲ್ಲದೆ ಹುಸಿಯಾಗುವ ಹಂತದಲ್ಲಿತ್ತು ಆದರೆ ನೆನ್ನೆ ರಾತ್ರಿ ಬಂದ ಮಳೆಯಿಂದ ಮೊಳಕೆಯೊಡೆಯಲು ಅನುಕೂಲವಾಗಿದೆ , ಮುಂದೆ ಚೆನ್ನಾಗಿ ಮಳೆ ಬಂದ್ರೆ ಉತ್ತಮ ಇಳುವರಿ ಬರುತ್ತದೆ, ಇಲ್ಲದಿದ್ರೆ ಬಿತ್ತಿದ ಬೀಜವೂ ಸಿಗುವುದಿಲ್ಲ : ಕೃಷಿಕ ಕೆಂಕೆರೆ ಚನ್ನಬಸವಯ್ಯ.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಪಾತ್ಯಕ್ಷಿಕೆಯಲ್ಲಿ 45 ಕ್ವಿಂಟಲ್ ಹಾಗೂ ಸಬ್ಸಿಡಿದರಲ್ಲಿ ಈಗಾಗಲೇ 48 ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದು, ಇನ್ನೂ ದಾಸ್ತಾನಿದ್ದರೂ ಸಹ ಮಳೆಯಿಲ್ಲದ ಕಾರಣ ರೈತರು ಬಿತ್ತನೆಗೆ ರಾಗಿ ಕೊಳ್ಳಲು ಬರುತ್ತಿಲ್ಲ , ಸದ್ಯ ಕೆ.ಎಂ.ಆರ್ ತಳಿ ಬಿತ್ತ ಬಹುದಾಗಿದ್ದು ಮಳೆ ಬಂದರೆ ರಾಗಿ ಕೊಳ್ಳಲು ಬಂದರೂ ಬರಬಹುದು : ತಿಪ್ಪೇಸ್ವಾಮಿ. ಕೃಷಿ ಸಹಾಯಕ, ಹುಳಿಯಾರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...