ವಿಷಯಕ್ಕೆ ಹೋಗಿ

ಹುಳಿಯಾರು ಎಪಿಎಂಸಿಯಲ್ಲಿ ಹೆಸರುಕಾಳಿನ ಸುಗ್ಗಿ ಎತ್ತ ಕಣ್ಣಾಯಿಸಿದರೂ ಹೆಸರುಕಾಳಿನ ರಾಶಿ ರಾಶಿ

ವರದಿ:ಡಿ.ಆರ್.ನರೇಂದ್ರಬಾಬು
ಹುಳಿಯಾರು : ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರಿನ ಪ್ರಮುಖ ಬೆಳೆಯಾಗಿ ಬಿಂಬಿತವಾಗಿರುವ ಹೆಸರು ಇದೀಗ ಫಸಲು ನೀಡಿದ್ದು ರೈತರು ಹೆಸರುಕಾಳನ್ನು ಮಾರಲು ಎಪಿಎಂಸಿಯತ್ತ ಮುಗಿಬಿದಿದ್ದು ಪಟ್ಟಣದ ಎಪಿಎಂಸಿಯಲ್ಲಿ ಹೆಸರುಕಾಳಿನ ವ್ಯಾಪಾರ ಭರಾಟೆಯಿಂದ ಕೂಡಿದ್ದು, ಎತ್ತ ಕಣ್ಣುಹಾಯಿಸಿದರೂ ಹೆಸರುಕಾಳಿನ ರಾಶಿ ಹಾಗೂ ಚೀಲಗಳೇ ಕಂಡುಬರುತ್ತಿವೆ.
ಹುಳಿಯಾರು ಎಪಿಎಂಸಿಯ ಅಂಗಡಿಗಳ ಮುಂದೆ ನಿಟ್ಟಾಕಿರುವ ಹೆಸರುಕಾಳಿನ ಚೀಲಗಳು.
ಈ ಬಾರಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದು ನಂತರ ಕಾಲಕ್ಕೆ ತಕ್ಕಂತೆ ಹದಮಳೆಯಾಗಿದ್ದು ಹೆಸರು ಹುಲುಸಾಗಿ ಬೆಳೆಯಲು ಸಹಕಾರಿಯಾಗಿತ್ತು. ಅಂತೆಯೇ ಹೋಬಳಿಯ ದಸೂಡಿ,ದಬ್ಬಗುಂಟೆ,ಹೊಯ್ಸಳಕಟ್ಟೆ, ಗಾಣಧಾಳು,ಕೆಂಕೆರೆ, ಯಳನಡು, ಕೋರಗೆರೆ, ತಿರುಮಲಾಪುರ,ನಂದಿಹಳ್ಳಿ, ದೊಡ್ಡಬಿದರೆ, ಬರಕನಹಾಳ್ ಸೇರಿದಂತೆ ಇನ್ನಿತರ ಹಳ್ಳಿಗಳ ಬಹುತೇಕ ಮಂದಿ ರೈತರು ತಮ್ಮ ಜಮೀನಿನಲ್ಲಿ ಹೆಸರು ಬಿತ್ತನೆ ಮಾಡಿದ್ದರು.
ಪೂರ್ವ ಮುಂಗಾರಿನ ನಂತರ ಕೆಲ ದಿನ ಮಳೆ ಬಾರದೆ ಬಿಸಿಲಝಳದ ಹೆಚ್ಚಳದಿಂದಾಗಿ ಹೆಸರು ಗಿಡದ ಎಲೆಗಳು ಹಳದಿಯಾಗುವಂತಾಗಿದ್ದು ಬಿಟ್ಟರೆ ಹೆಸರಿನಲ್ಲಿ ಮತ್ಯಾವುದೇ ರೀತಿಯ ರೋಗಬಾಧೆ ಕಂಡುಬಂದಿಲ್ಲ. ಕೆಲ ರೈತರು ತಾವೇ ಈ ಹಿಂದೆ ದಾಸ್ತಾನು ಮಾಡಿಕೊಂಡಿದ್ದ ಹೆಸರುಕಾಳುಗಳನ್ನೇ ಬಿತ್ತನೆಗೆ ಬಳಸಿದ್ದರೆ, ಮತ್ತೆ ಕೆಲ ರೈತರು ರೈತಸಂಪರ್ಕ ಕೇಂದ್ರದಲ್ಲಿ ನೀಡಿದ ಹೆಸರುಕಾಳುಗಳನ್ನು ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ.
ಹುಳಿಯಾರು ಎಪಿಎಂಸಿಗೆ ಹೆಸರು ಮಾರಲು ಬಂದಿರುವ ಹೋಬಳಿಯ ವಿವಿಧ ಹಳ್ಳಿಗರ ರೈತರು.
ಹೋಬಳಿ ಸುತ್ತಮುತ್ತಲ ಹಳ್ಳಿಯ ರೈತರು ತಾವು ಬೆಳೆದ ಹೆಸರನ್ನು ಪಟ್ಟಣದ ಮಾರುಕಟ್ಟೆಗೆ ತಂದು ಮಾರುತ್ತಿದ್ದಾರೆ. ಮಾರುಕಟ್ಟೆಗೆ ಹೆಸರಿನ ಅವಕ ಹೆಚ್ಚುತ್ತಿದ್ದಂತೆಯೇ ಬೆಲೆಯಲ್ಲಿ ಅಲ್ಪ ಕುಸಿತಕಂಡಿದೆ. ಈ ಮೊದಲು ಹೆಸರು ಬಿತ್ತನೆ ಸಮಯದಲ್ಲಿ ಪ್ರತಿ ಕ್ವಿಂಟಾಲ್ ಹೆಸರು ೮೦೦೦ ತಲುಪಿದ್ದರೆ, ಈಗ ಪ್ರತಿ ಕ್ವಿಂಟಲ್ ಗೆ ೫ ರಿಂದ ೬ ಸಾವಿರ ಅಸುಪಾಸಿನಲ್ಲಿದೆ. ಹೆಸರು ಬಿತ್ತನೆ ಮಾಡುವಾಗ ಹೆಚ್ಚಾಗಿದ್ದ ಬೆಲೆ , ಹೆಸರು ಕುಯ್ಯುವ ಹಂತದಲ್ಲಿ ಇಳಿಯುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ. ಹೆಸರು ಮಾರುಕಟ್ಟೆಗೆ ಬಂದಾಗ ೬೫೦೦ರಿಂದ ಶುರುವಾಗಿದ್ದ ಬೆಲೆ ಈಗ ೫೮೦೦ರೂ ತಲುಪಿದೆ. ಈಗಿನ ಗೊಬ್ಬರ, ಬೇಸಾಯ, ಕೂಲಿ ಎಲ್ಲವನ್ನು ಲೆಕ್ಕಹಾಕಿದರೆ ಏನು ಉಳಿಯುವುದಿಲ್ಲ ಎನ್ನುತ್ತಾರೆ ರೈತರು.
ಪಟ್ಟಣದ ಮಾರುಕಟ್ಟೆಯಲ್ಲಿ ಖರೀದಿಯಾಗುವ ಹೆಸರುಕಾಳು ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಗೂ ರವಾನೆಯಾಗುತ್ತಿದ್ದು ಪ್ರತಿನಿತ್ಯ ಮೂರ್ನಾಲ್ಕು ಲಾರಿ ಲೋಡ್ ರವಾನೆಯಾಗುತ್ತಿದೆ. ಕಳೆದ ತಿಂಗಳು ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿದ್ದ ಎಪಿಎಂಸಿಯ ಅಂಗಡಿಗಳು ಇದೀಗ ರೈತರಿಂದ ತುಂಬಿದ್ದು ಅಂಗಡಿಯ ತುಂಬೆಲ್ಲಾ ಹೆಸರುಕಾಳಿನದ್ದೇ ಸದ್ದಾಗಿದೆ.
ಹುಳಿಯಾರು, ಹೊಸದುರ್ಗ, ಅರಸಿಕೆರೆಯಲ್ಲಿರುವ ಎಪಿಎಂಸಿಗಳು ಹೆಸರಿಗೆ ಉತ್ತಮ ಮಾರುಕಟ್ಟೆಗಳಾಗಿದ್ದು ಬೆಲಗೂರು,ಹಂದನಕೆರೆಯ ಉಪ ಮಾರುಕಟ್ಟೆಗಳಿಗೂ ಸಹ ಹೆಸರಿನ ಅವಕ ಹೆಚ್ಚಾಗಿ ಕಂಡುಬರುತ್ತಿದೆ. ಈಬಾರಿ ಬೆಳೆ ಚೆನ್ನಾಗಿದ್ದು ನಾಟಿ ಕಾಳಿಗಿಂತ ಮಿಂಚುಕಾಳಿಗೆ ಬೇಡಿಕೆ ಹೆಚ್ಚಿದೆ. ಇನ್ನೂ ೨ ತಿಂಗಳು ಭರಪೂರ ವ್ಯಾಪಾರ ನಡೆಯಲಿದೆ.:
ಎಲ್.ಆರ್.ಬಾಲಾಜಿ.ರವಾನೆದಾರ ಹುಳಿಯಾರು ಎಪಿಎಂಸಿ.

ಬಿತ್ತನೆ : ಕೃಷಿ ಇಲಾಖೆಯ ಮಾಹಿತಿಯಂತೆ ಈ ಬಾರಿ ಹೋಬಳಿ ವ್ಯಾಪ್ತಿಯಲ್ಲಿ ೨,೦೫೦ ಹೆಕ್ಟೇರ್ ಪ್ರದೇಶಾದಲ್ಲಿ ಹೆಸರು ಬಿತ್ತನೆಯಾಗಿದ್ದು ಇಲಾಖೆಯಿಂದ ಬಿಜಿಎಸ್-೯ ತಳಿಯ ೩೪ ಕ್ವಿಂಟಾಲ್ ಹೆಸರನ್ನು ಸಬ್ಸಿಡಿದರದಲ್ಲಿ ಬಿತ್ತನೆಗೆ ನೀಡಿದ್ದಾರೆ. ೧೭೦ ಹೆಕ್ಟೇರ್ ನಷ್ಟು ಅಲಸಂದೆ, ೨೫ ಹೆಕ್ಟೇರ್ ನಷ್ಟು ಉದ್ದು, ೧೮೫ ಹೆಕ್ಟೇರ್ ನಷ್ಟು ತೊಗರಿ ಬಿತ್ತನೆಯಾಗಿರುವುದಾಗಿ ಎಡಿಎ ಹೊನ್ನದಾಸೇಗೌಡ ತಿಳಿಸಿದ್ದಾರೆ.
ಇಳುವರಿಯೇನೋ ಉತ್ತಮವಾಗಿದೆ ಕಟಾವಿನ ಸಮಯದಲ್ಲಿ ಬಿಟ್ಟುಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಹೆಸರನ್ನು ಒಣಗಿಸಲಾಗದೆ ಬಣ್ಣ ಕಪ್ಪಾಗುತ್ತಿದ್ದು, ಉತ್ತಮ ಬೆಲೆ ಸಿಗದಂತಾಗಿದೆ : ಜಾತ್ರಾನಾಯ್ಕ,ರೈತ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.