ವಿಷಯಕ್ಕೆ ಹೋಗಿ

ನವರಾತ್ರಿಯ ಬೊಂಬೆ ಹಬ್ಬದ ಸಂಭ್ರಮ

       ಮಹಾಲಯ ಅಮಾವಾಸ್ಯೆ ಮುಗಿದು ಆಶ್ವಿಜ ಮಾಸದ ಪಾಡ್ಯದಿಂದ ನವರಾತ್ರಿ ಸಂಭ್ರಮ ಶುರುವಾಗಲಿದೆ.ನಾಡಹಬ್ಬವಾಗಿ ದಸರಾದ ಆಚರಣೆಯ ಸಂತಸ ಒಂದೆಡೆಯಾದರೆ ಮನೆಗಳಲ್ಲಿ ಬೊಂಬೆ ಕೂರಿಸುವ ಸಡಗರ ಮತ್ತೊಂದೆಡೆ.ಮನೆಗಳಲ್ಲಿ ಬೊಂಬೆಗಳನ್ನು ಚೆಂದವಾಗಿ ಜೋಡಿಸಿ ಪೂಜಿಸುವುದು ಕೆಲವೊಂದು ಮನೆಗಳಲ್ಲಿ ಸಂಪ್ರದಾಯವಾಗಿದೆ.ಬೊಂಬೆಹಬ್ಬ ನವರಾತ್ರಿಯ ಒಂಬತ್ತು ದಿನಗಳು ನಡೆಯಲಿದ್ದು ಇದಕ್ಕಾಗಿ ಎರಡು ಮೂರು ದಿನಗಳಿಂದಲೆ ಬೊಂಬೆ ಜೋಡಿಸುವ ಕಾರ್ಯ ಆರಂಭವಾಗುತ್ತದೆ.
ಪಾಡ್ಯದಂದು ಆಚರಿಸುವ ಬೊಂಬೆಹಬ್ಬದ ಪ್ರಯುಕ್ತ ಹುಳಿಯಾರಿನ ಮನೆಯೊಂದರಲ್ಲಿ ಬೊಂಬೆ ಕೂರಿಸಿರುವುದು.
          ಬೊಂಬೆ ಹಬ್ಬವೆಂದರೆ ಪಟ್ಟದ ಬೊಂಬೆಯ ಜೊತೆಗೆ ಒಂದಷ್ಟು ಬೊಂಬೆಗಳನ್ನು ಇಟ್ಟು ಪೂಜಿಸುವುದು.ಸಂಗ್ರಹದಲ್ಲಿರುವ ಎಲ್ಲಾರೀತಿಯ ಬೊಂಬೆಗಳನ್ನು ಜೋಡಿಸುತ್ತರಾದರೂ ಪಟ್ಟದ ಬೊಂಬೆಗೆ ಪ್ರಥಮ ಪ್ರಾಶಸ್ತ್ಯ. ಪಟ್ಟದ ಬೊಂಬೆಯು ಚಂದನದಿಂದ ಕೆತ್ತಿದ ಗಂಡು ಹೆಣ್ಣಿನ ಜೋಡಿಯ ಸುಂದರವಾದ ಸಾಂರದಾಯಿಕ ಶೈಲಿಯ ಬೊಂಬೆಯಾಗಿದ್ದು ಇದನ್ನು ಶ್ರೀನಿವಾಸ ಪದ್ಮಾವತಿಯ ಪ್ರತೀಕವೆಂದು ಭಾವಿಸಲಾಗುತ್ತದೆ.ಹೆಚ್ಚಾಗಿ ತಿರುಪತಿಯಲ್ಲಿ ದೊರಕುವ ಈ ಬೊಂಬೆಗೆ ಯಾವಾಗಲೂ ಅಗ್ರ ಸ್ಥಾನ.ಪಟ್ಟದ ಬೊಂಬೆಗಳಿಗೆ ಸಾಂಪ್ರದಾಯಿಕ ಉಡುಗೆ ತೊಡಿಸಿ ಶೃಂಗಾರ ಮಾಡುವುದು ಕೂಡ ಒಂದು ಕಲೆಯಾಗಿದ್ದು ಎಲ್ಲರಿಗೂ ಬರುವಂತದಲ್ಲ. ಮದುವೆಯ ಸಮಯದಲ್ಲಿ ತಾಯಿ ಮನೆಯಿಂದ ಮಗಳಿಗೆ ಈ ಬೊಂಬೆ ಕೊಡುವುದು ವಾಡಿಕೆ.ಸುಖ ದಾಂಪತ್ಯದ ಪ್ರತೀಕವೆನ್ನುವ ಈ ಬೊಂಬೆಯನ್ನು ಈ ಸಮಯದಲ್ಲಿ ಮಾತ್ರ ಪ್ರದರ್ಶನಕ್ಕಿಟ್ಟು ನಂತರ ಜೋಪಾನವಾಗಿ ತೆಗೆದಿಡಲಾಗುತ್ತದೆ.
       ಬೊಂಬೆ ಜೋಡಿಸುವುದು ಸುಮ್ಮನೆಯ ಮಾತಲ್ಲ.ಕಲ್ಪನೆಯಂತೆ ಎಲ್ಲಾ ರೀತಿಯ ಬೊಂಬೆಗಳನ್ನು ಅವುಗಳ ಗಾತ್ರ,ಆಧಾರದ ಮೇಲೆ ಅಂದವಾಗಿ ಮೆಟ್ಟಿಲು ಮೆಟ್ಟಿಲಾಗಿ ಇಟ್ಟು ಜೋಡಿಸುವುದಕ್ಕೆ ಮತ್ತೊಬ್ಬರ ಸಹಕಾರ ಅಗತ್ಯ.ಮಕ್ಕಳಾಡುವ ಬೊಂಬೆಗಳಿಂದ ಹಿಡಿದು ಎಲ್ಲಾ ರೀತಿಯ ವೈವಿಧ್ಯಮಯ ಬೊಂಬೆಗಳನ್ನೂ ಕೂರಿಸುವುದಕ್ಕೆ ರೂಢಿ. ಆಡುಗೆ ಮನೆ ಸೆಟ್ಟು,ಹೊಲಗದ್ದೆ,ಅರಣ್ಯದಲ್ಲಿ ಕಾಡುಪ್ರಾಣಿಗಳು,ಮದುವೆ,ಡುಮ್ಮಡುಮ್ಮಿ,ಸೈನಿಕರುಆನೆಗಳು,ದೇಶಪ್ರೇಮದ ಬೊಂಬೆಗಳು ಹೆಚ್ಚಿನದಾಗಿ ಎಲ್ಲರ ಮನೆಯಲ್ಲೂ ಕಾಣಸಿಗುವ ಬೊಂಬೆಗಳಾಗಿವೆ
      ಸಾಮಾನ್ಯವಾಗಿ ಆಶ್ವೀಜದ ಪಾಡ್ಯದಿಂದ ದಶಮಿಯವರೆಗೂ ಬೊಂಬೆ ಕೂರಿಸುವುದಿದ್ದು ಕೆಲವರು ಶಾರದೆ ಹಬ್ಬದಂದು ಕೂಡ ಕೂರಿಸುವ ಪರಿಪಾಠವಿದೆ.ಬರಿ ಬೊಂಬೆ ಇಟ್ಟರೆ ಇದು ಮುಗಿಯುವುದಿಲ್ಲ. ಪ್ರತಿದಿನ ಸಂಜೆ ಆರತಿ ಮಾಡಿ ಬೊಂಬೆ ನೋಡಲು ಬರುವ ಮಕ್ಕಳಿಗೆ ಬೊಂಬೆ ಬಾಗಿನ ಕೊಡುವ ಸಂಪ್ರದಾಯವಿದೆ.
        ಒತ್ತಡದ ಬದುಕಿನಲ್ಲಿ ಬೊಂಬೆ ಹಬ್ಬಕ್ಕೆ ವ್ಯವಧಾನವಿಲ್ಲದವರೂ ಬೊಂಬೆ ಜೋಡಿಸಿದ ಶೋಕೇಸ್ ಕೆಳಗೆ ಪಟ್ಟದ ಬೊಂಬೆ ಇಟ್ಟು ಪೂಜಿಸುವ ಮೂಲಕವಾದರೂ ಹಬ್ಬವನ್ನು ಆಚರಿಸಿದ ಸಂತೃಪ್ತಿ ಪಡೆಯುತ್ತಾರೆ. ದಶಮಿಯಂದು ಪಟ್ಟದ ಬೊಂಬೆಗಳನ್ನು ಮಲಗಿಸಿ ವಿಸರ್ಜಿಸುವ ಮೂಲಕ ಬೊಂಬೆ ಹಬ್ಬಕ್ಕೆ ತೆರೆ ಬೀಳುತ್ತದೆ.

        ಇಂತಹ ಹಬ್ಬ ಕಾಲನ ಸುಳಿಗೆ ಸಿಕ್ಕು ಮರೆಯಾಗುತ್ತಿರುದು ವಿಷಾದನೀಯ.ಟಿವಿ.ಕಂಪ್ಯೂಟರ್ ನಲ್ಲೆ ಕಾಲ ಕಳೆಯುವ ಇಂದಿನ ಮಕ್ಕಳಿಗೆ ಈ ಬೊಂಬೆಹಬ್ಬ ಪದವೆ ವಿಚಿತ್ರವಾಗಿ ಕೇಳಿಬಂದರೂ ಆಶ್ಚರ್ಯವಿಲ್ಲ.ಬೊಂಬೆ ಅಂದರೆ ಬಾರ್ಬಿ ಮಾತ್ರ ಎನ್ನುವ ಕಲ್ಪನೆ ಮೂಡಿರುವ ಮಕ್ಕಳಲ್ಲಿ ಬೊಂಬೆಹಬ್ಬದ ಮಹತ್ವದ ಬಗ್ಗೆ ತಿಳಿಹೇಳಬೇಕಿದೆ. ಇದೊಂದು ಸಂಪ್ರದಾಯ ಎನ್ನುವ ಕಾರಣದಿಂದ ಉಳಿದು ಬಂದಿರುವ ಈ ಹಬ್ಬದ ಬಗ್ಗೆ ಅರಿವು ಮೂಡಿಸಬೇಕಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...