ರೈತರಿಗೆ ಹಾಗೂ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿ ಪುಟ್ಟಣ್ಣಯ್ಯ ಬಣದ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ವಿವಿಧ ಇಲಾಖೆಗಳಿಗೆ ತೆರಳಿ ಚುರುಕು ಮುಟ್ಟಿಸಿದ ಪ್ರಸಂಗ ಬುಧವಾರ ನಡೆಯಿತು.
ಹುಳಿಯಾರು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ತಾಲ್ಲೂಕು ಅಧ್ಯಕ್ಷ ಹೊಸಳ್ಳಿ ಚಂದ್ರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಸಿದರು |
ಪಟ್ಟಣದ ಪರಿವೀಕ್ಷಣ ಮಂದಿರಲ್ಲಿ ತಾಲ್ಲೂಕು ಅಧ್ಯಕ್ಷ ಹೊಸಳ್ಳಿ ಚಂದ್ರಪ್ಪ ಅವರ ನೇತೃತ್ವದಲ್ಲಿ ಸಭೆ ಸೇರಿದ ಪದಾಧಿಕಾರಿಗಳು ರೈತರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಳಿಕ ಕೃಷಿಉತ್ಪನ್ನ ಮಾರುಕಟ್ಟೆ,ಪಶುಆಸ್ಪತ್ರೆ, ಬೆಸ್ಕಾಂ ಕಛೇರಿ, ರೈತಸಂಪರ್ಕ ಕೇಂದ್ರಕ್ಕೆ ತೆರಳಿ ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾತಿನ ಚಕಮುಕಿ ನಡೆಸಿದರು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದೆ ಇಲ್ಲಿಗೆ ರಾಸುಗಳನ್ನು ಹೊಡೆದುಕೊಂಡು ಬರುವ ರೈತರು ನಿತ್ಯ ಪರದಾಡುವಂತಾಗಿದೆ. ಜೊತೆಗೆ ರಾಸುಗಳಿಗೆ ಬರುವ ರೋಗಗಳಿಗೆ ಹಾಕಿಸುವ ಲಸಿಕಗಳ ಬಗ್ಗೆ ತಿಳಿಸಲು ಯಾರು ಇಲ್ಲದ ಕಾರಣ ರೈತರಿಗೆ ತೊಂದರೆಯಾಗುತ್ತಿದೆ. ಇಲ್ಲಿರುವ ವೈದ್ಯರಲ್ಲಿ ಒಬ್ಬ ವೈದ್ಯ ಕಳೆದ ಮೂರು ತಿಂಗಳಿಂದ ಆಸ್ಪತ್ರೆಗೆ ಬಂದಿಲ್ಲ ಅದರೂ ಸಹ ಈ ಬಗ್ಗೆ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿದಿಲ್ಲ. ಈ ಹಿಂದೆ ಇದ್ದ ವೈದ್ಯ ಮಂಜುನಾಥ್ ಅವರು ವರ್ಗಾವಣೆಯಾಗಿ ಮೂರುತಿಂಗಳು ಕಳೆಯುತ್ತಿದ್ದರೂ ಸಹ ಅವರ ಸ್ಥಾನಕ್ಕೆ ಯಾವೊಬ್ಬ ವೈದ್ಯರನ್ನು ನೇಮಕ ಮಾಡಿಲ್ಲ ಎಂದು ದೂರಿ, ಸದ್ಯ ಒಬ್ಬ ವೈದ್ಯರನ್ನಾದರೂ ಇಲ್ಲಿ ಖಾಯಂ ಆಗಿ ಹಾಕುವಂತೆ ಒತ್ತಾಯಿಸಿದರು.
ನಂತರ ರೈತಸಂಪರ್ಕ ಇಲಾಖೆಗೆ ತೆರಳಿ ಇಲಾಖೆಗೆ ಬರುವ ಸೌಲಭ್ಯಗಳ ಬಗೆಗಿನ ಮಾಹಿತಿ ರೈತರಿಗೆ ತಿಳಿಯುತ್ತಿಲ್ಲ, ರೈತ ಅನುವುಗಾರರ ಮೂಲಕ ಇಲಾಖೆಯಲ್ಲಿ ದೊರೆಯಲ್ಲಿನ ಮಾಹಿತಿಯನ್ನು ತಿಳಿಸುವ ಕಾರ್ಯವಾಗಬೇಕು. ರಾಗಿ ಬೆಳೆಗೆ ಬಿದ್ದಿರುವ ಹಸಿರುಹುಳುಗಳ ನಿವಾರಣೆಗೆ ಸಬ್ಸಿಡಿ ದರದಲ್ಲಿ ಔಷಧಿ ನೀಡುವಂತೆ ಮನವಿ ಮಾಡಿದರು.
ಎಪಿಎಂಸಿ ಕಛೇರಿಗೆ ತೆರಳಿದ್ದ ರೈತರ ತಂಡ ಸಹಕಾರ್ಯದರ್ಶಿ ಅವರೊಂದಿಗೆ ಮಾತುಕತೆ ನಡೆಸಿ ಈ ಹಿಂದೆ ವಾರಕ್ಕೆ ಎರಡು ಬಾರಿ ಕೊಬ್ಬರಿ ಟೆಂಡರ್ ಮಾಡುತ್ತಿತ್ತು ಆದರೆ ಈಗ ವಾರಕ್ಕೊಮ್ಮೆ ಟೆಂಡರ್ ಮಾಡುತ್ತಿದ್ದು ವಾರಪೂರ್ತಿ ಒಂದೇ ಮೌಲ್ಯದಲ್ಲಿ ಕೊಬ್ಬರಿ ಮಾರುವಂತಾಗಿದೆ.
ತಿಪಟೂರು,ಅರಸೀಕೆರೆ ಎಪಿಎಂಸಿಯಲ್ಲಿ ವಾರಕ್ಕೆ ಎರಡು ಬಾರಿ ಟೆಂಡರ್ ಮಡುವಂತೆ ಇಲ್ಲೂ ಸಹ ಮಾಡಿ ಎಂದು ಪಟ್ಟು ಹಿಡಿದರು.
ಎಪಿಎಂಸಿ ಅಧಿಕಾರಿಯೊಂದಿಗೆ ವಾರಕ್ಕೆರಡು ಬಾರಿ ಕೊಬ್ಬರಿ ಟೆಂಡರ್ ಮಾಡುವಂತೆ ಚರ್ಚೆಗಿಳಿದ ರೈತ ಸಂಘದವರು. |
ಬೆಸ್ಕಾಂ ಕಛೇರಿಯಲ್ಲಿನ ಎಸ್ಓ ಅವರೊಂದಿಗೆ ಚರ್ಚಿಸಿ, ಕಳೆದ 7 ವರ್ಷಗಳಿಂದ ಹುಳಿಯಾರು ಪಕ್ಕದ ಕೆಸಿ ಪಾಳ್ಯಕ್ಕೆ ಟೌನ್ ಲಿಮಿಟ್ ವಿದ್ಯುತ್ ನೀಡುತ್ತಿದ್ದು ಇದೀಗ ಏಕಾಏಕಿ ಕಡಿತ ಮಾಡಿದ್ದೀರಾ ಏಕೆ ಎಂದು ಪ್ರಶ್ನಿಸಿದರಲ್ಲದೆ, ಕೆಸಿಪಾಳ್ಯದ ಪಕ್ಕದ ಲಿಂಗಪ್ಪನ ಪಾಳ್ಯಕ್ಕೂ ಟೌನ್ ಲಿಮಿಟ್ ವಿದ್ಯುತ್ ನೀಡುವಂತೆ ಕೇಳಿಕೊಂಡರು. ಎಸ್ಓ ಉಮೇಶ್ ನಾಯಕ್ ಇದಕ್ಕೆ ಪ್ರತಿಕ್ರಿಯಿಸಿ ಈ ಹಿಂದೆ ಟೌನ್ ಲಿಮಿಟ್ ವಿದ್ಯುತ್ ನೀಡುತ್ತಿತ್ತು ಇದೀಗ ಬಳಕೆ ಪ್ರಮಾಣ ಹೆಚ್ಚಾದ ಪರಿಣಾಮ ಓವರ್ ಲೋಡ್ ನಿಂದ ಟಿ.ಸಿ. ಗಳು ಕೆಟ್ಟು ಹೋಗುತ್ತಿವೆ ಆ ಹಿನ್ನಲೆಯಲ್ಲಿ ಕಡಿತ ಮಾಡಲಾಗಿದೆ. ಮುಂದಿನವರ್ಷದಿಂದ ಎಲ್ಲಾ ಹಳ್ಳಿಗಳಿಗೂ ನಿರಂತರ ವಿದ್ಯುತ್ ಸಂಪರ್ಕದ ವ್ಯವಸ್ಥೆಯಾಗಿದ್ದು, ಕಾಮಗಾರಿ ಮಾತ್ರ ನಡೆಯಬೇಕಿದೆ ಎಂದರು.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಪುಟ್ಟಣ್ಣಯ್ಯ ಅವರನ್ನು ಪೋನ್ ಮುಖಾಂತರ ಸಂಪರ್ಕಿಸಿದ ಅವರುಗಳು ಇದೀ ತಿಂಗಳ 21ರಂದು ಬೆಂಗಳೂರಿಗೆ ತೆರಳಿ ಆಯಾ ಇಲಾಖಾ ಮಂತ್ರಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿಮಾಡಿಕೊಂಡರು.
ಈ ವೇಳೆ ಹೋಬಳಿಯ ಕೆಂಕೆರೆ,ಲಿಂಗಪ್ಪನಪಾಳ್ಯ, ಸೂರಗೊಂಡನಹಳ್ಳಿ,ಹೊಸಳ್ಳಿ, ಬರಕನಹಾಲ್ ಸೇರಿದಂತೆ ವಿವಿಧ ಹಳ್ಳಿಗಳ ಪದಾಧಿಕಾರಿಗಳ ಜೊತೆ ಮಹಿಳಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ