ವರದಿ ; ಡಿ.ಆರ್.ನರೇಂದ್ರಬಾಬು
ಹುಳಿಯಾರು : ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಹತ್ತದಿನೈದು ದಿನಗಳಿಂದ ಹದ ಮಳೆಯಾದ ಹಿನ್ನಲೆಯಲ್ಲಿ ಈ ಭಾಗದ ಮುಂಗಾರಿನ ಪ್ರಮುಖ ಬೆಳೆಯಾದ ಹೆಸರು ಸೇರಿದಂತೆ ತೊಗರಿ,ಎಳ್ಳು ಹಾಗೂ ಇತರ ಬೆಳೆಗಳ ಬಿತ್ತನೆ ಕಾರ್ಯ ಹೆಚ್ಚು ಪ್ರಗತಿಯಲ್ಲಿದ್ದು , ಎಲ್ಲೆಡೆ ಹೆಸರು,ಎಳ್ಳಿನ ಗಿಡಗಳು ಚಿಗುರೊಡೆದು ನಳನಳಿಸುತ್ತಿವೆ.
ಈ ಬಾರಿ ಪೂರ್ವ ಮುಂಗಾರಿನಲ್ಲಿ ಹದಮಳೆಯಾದ್ದರಿಂದ ರೈತರು ತಮ್ಮ ಜಮೀನುಗಳಲ್ಲಿ ಹೆಸರುಬಿತ್ತನೆ ಮಾಡಲು ಮುಂದಾಗಿದ್ದರು. ಹೋಬಳಿಯ ದಸೂಡಿ,ರಂಗನಕೆರೆ, ಹೊಯ್ಸಳಕಟ್ಟೆ, ಗಾಣಧಾಳು,ಕೆಂಕೆರೆ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಬಿತ್ತನೆ ಮಾಡಿದ್ದು ಇದೀಗ ಹೆಸರು ಸೊಗಸಾಗಿ ಚಿಗುರೊಡೆದು ನಿಂತಿದ್ದರೆ, ಹೋಬಳಿಯ ಯಳನಡು, ತಿರುಮಲಾಪುರ, ಸೀಗೆಬಾಗಿ, ಬರಕನಹಾಳ್ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಕಳೆದೊಂದು ವಾರದಿಂದ ಬಿತ್ತನೆ ಮಾಡುತ್ತಿದ್ದಾರೆ.
ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ೧೧೨೫ ಹೆಕ್ಟೇರ್ ನಷ್ಟು ಹೆಸರು, ೧೧೦ ಹೆಕ್ಟೇರ್ ತೊಗರಿ, ೫೪ ಹೆಕ್ಟೇರ್ ಅಲಸಂದೆ, ೫೧ ಹೆಕ್ಟರ್ ಎಳ್ಳು, ೫೦ ಹೆಕ್ಟೇರ್ ಜೋಳದ ಬಿತ್ತನೆಯಾಗಿದೆ. ಮೇ ತಿಂಗಳ ಅಂತ್ಯದವರೆಗೆ ಮುಂಗಾರು ಬೆಳೆಗಳನ್ನು ಬಿತ್ತುವುದಿದ್ದು ಇನ್ನೂ ಹಲವು ಮಂದಿ ರೈತರು ಬಿತ್ತನೆ ಮಾಡುತ್ತಿದ್ದಾರೆ.
ಕಳೆದ ಬಾರಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿತ್ತಾದರೂ ಸಹ ಹೆಸರು ಕಾಯಿಕಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟು ಹೆಸರಿನ ಇಳುವರಿ ಕುಂಠಿತವಾಗುವಂತೆ ಮಾಡಿತ್ತು. ರೈತರು ಹಾಕಿದ ಬೀಜ,ಗೊಬ್ಬರ, ಬೇಸಾಯದ ಕೂಲಿಗೆ ಸಮನಾಗುವಂತೆ ಹೆಸರುಕಾಳು ಕೈಸೇರಿದ್ದವು. ಈ ಬಾರಿ ಸೂಕ್ತ ಸಮಯದಲ್ಲಿ ಮಳೆಯಾಗುತ್ತಿದ್ದು ಅದೇ ರೀತಿ ಮುಂದೆಯೂ ಸಹ ಮಳೆ ಬಂದರೆ ಹೆಸರು ಹುಲುಸಾಗಿ ಬೆಳೆದು ಕಾಯಿಕಟ್ಟುವುದಲ್ಲದೆ, ಯಾವುದೇ ಕೀಟಬಾಧೆಯಿಲ್ಲದೆ ಹೆಚ್ಚಿನ ಇಳುವರಿಯಾಗುವ ಮೂಲಕ ರೈತರ ಕೈ ಸೇರಲಿದೆ.
ಕಾರ್ಮಿಕರ ಕೊರತೆ: ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರ ಕೊರತೆ ಹಾಗೂ ರೈತರ ಬಳಿ ಜಾನುವಾರುಗಳ ಸಂಖ್ಯೆ ಕೂಡ ಸಾಕಷ್ಟು ಕಡಿಮೆ ಇದೆ. ಹೀಗಾಗಿ ಟ್ರಾಕ್ಟರ್ಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ಹೊಲವನ್ನು ಸ್ವಚ್ಛಗೊಳಿಸದೆ ಹಾಗೆಯೇ ಹೆಸರು ಕಾಳು ಚೆಲ್ಲಿ ಟ್ರ್ಯಾಕ್ಟರ್ಗಳಲ್ಲಿ ಉಳುಮೆ ಮಾಡಿಸುತ್ತಿದ್ದಾರೆ.
ಎಲ್ಲೆಡೆ ಹೆಸರು ಬಿತ್ತನೆ ಬರದಿಂದ ಸಾಗುತ್ತಿದ್ದು ಕೆಲ ರೈತರು ಈ ಹಿಂದೆ ಸಂಗ್ರಹಿಟ್ಟುಕೊಂಡಿದ್ದ ಹೆಸರುಕಾಳುಗಳನ್ನು ಬಿತ್ತನೆಗೆ ಬಳಸುತ್ತಿದ್ದರೆ ಮತ್ತೆ ಕೆಲ ರೈತರು ಬಿತ್ತನೆ ಬೀಜದ ಹೆಸರು ಕಾಳುಗಳ ಹುಡುಕಾಟ ನಡೆಸಿದ್ದಾರೆ. ಬೀಜದ ಹೆಸರುಕಾಳು ಮಾರುಕಟ್ಟೆಯಲ್ಲಿ ಸಿಗಬಹುದೆಂದು ಕೆಲ ರೈತರು ಮುಖ ಮಾಡಿದ್ದು ಪ್ರತಿ ಕೆಜಿ ಹೆಸರು ಕಾಳಿಗೆ ೭೦ ರಿಂದ ೧೦೦ ಬೆಲೆ ಕೇಳಿ ವಾಪಸ್ಸಾಗುತ್ತಿದ್ದಾರೆ. ತಾವು ಹೆಸರು ಕಾಳನ್ನು ಬೆಳೆದು ಮಾರಲು ಬಂದಾಗ ಮಾತ್ರ ಕೆಜಿಗೆ ೨೫ ರಿಂದ ೩೦ ರೂ ಇರುತ್ತೆ ಆದರೆ ಇದೀಗ ದುಪ್ಪಟ್ಟು ಬೆಲೆಯಾಗಿದ್ದು ನಾವು ಬೆಳೆದು ಮಾರಿದ ಬೆಳೆಗೆ ದುಪ್ಪಟ್ಟು ಹಣಕೊಡುವಂತಾಗಿದೆಯಲ್ಲಾ ಎಂಬುದು ರೈತರ ಮಾತಾಗಿದೆ.
ಒಟ್ಟಾರೆ ಪೂರ್ವ ಮುಂಗಾರು ಉತ್ತವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಎಲ್ಲೆಡೆ ಮುಂಗಾರು ಬೆಳೆ ಹೆಸರನ್ನು ಚೆಲ್ಲಿಸಿರುವಂತೆ ಮುಂದೆ ಬರಲಿರುವ ಮಳೆಗಳೂ ಸಹ ಸೂಕ್ತ ಸಮಯಕ್ಕೆ ಬಂದರೆ ಬಿತ್ತಿದ ಹೆಸರು ರೈತರ ಕೈಸೇರಿ ರೈತರ ಬಾಳು ಹಸನಾಗಲಿದೆ.
---------------
ಹೆಸರುಕಾಳು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇಲ್ಲಿನ ಹೆಸರಿಗೆ ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಬೇಡಿಕೆಯಿದ್ದು, ಹುಳಿಯಾರು ಎಪಿಎಂಸಿಯಲ್ಲಿ ಹೆಚ್ಚಿನ ಪ್ರಮಾಣದ ಹೆಸರು ಖರೀದಿ ಆಗುತ್ತದೆ : ಬಾಲಾಜಿ, ಧಾನ್ಯ ರವಾನೆದಾರ, ಹುಳಿಯಾರು.
--------------
ರೈತರಿಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಬಿಜಿಎಸ್-೯ ತಳಿಯ ಬಿತ್ತನೆ ಬೀಜದ ಹೆಸರಿನ ೫ ಕೆಜಿ ಬ್ಯಾಗ್ ಗೆ ಸಬ್ಸಿಡಿದರ ೩೯೦ಕ್ಕೆ ನೀಡುತ್ತಿದ್ದು, ಇದರ ಜೊತೆಗೆ ಬಿಆರ್ ಜಿ-೧ ತಳಿಯ ತೊಗರಿ, ಸಿ೧೫೨ ತಳಿಯ ಅಲಸಂದೆಯನ್ನು ಸಬ್ಸಿಡಿ ದರದಲ್ಲಿ ವಿತರಿಸುತ್ತಿದ್ದೇವೆ : ತಿಫ್ಫೇಸ್ವಾಮಿ, ಸಹಾಯಕ ಕೃಷಿ ಅಧಿಕಾರಿ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ