ಈ ಸಲವೂ ಈಡೇರದ ನಿರೀಕ್ಷೆ
-------------
ವರದಿ : ಡಿ.ಆರ್.ನರೇಂದ್ರಬಾಬುಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಅತಿದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿ ಈ ಬಾರಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಬೇಕಾಗಿದ್ದ ಹುಳಿಯಾರು ಈ ಚುನಾವಣೆಯಲ್ಲೂ ಗ್ರಾಮ ಪಂಚಾಯ್ತಿಯಾಗಿಯೇ ಮುಂದುವರಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರ ಎಸ್.ಜಿ. ನಂಜಯ್ಯನಮಠ ನೇತೃತ್ವದ ಸಮಿತಿ ಶಿಫಾರಸಿನಂತೆ ರಾಜ್ಯದ 40 ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯ್ತಿಗಳಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪಮಾಡಿದೆ. ಆದರೆ ಈ ಪಟ್ಟಿಯಲ್ಲಿ ಜಿಲ್ಲೆಯ ಹುಳಿಯಾರನ್ನು ಮೇಲ್ದರ್ಜೆಗೇರಿಸದೆ ನಿರ್ಲಕ್ಷವಹಿಸಿದ್ದು, ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರುವ ಅವಕಾಶ ಈ ಬಾರಿಯೂ ಬಾರದೆ ಬಹುದಿನಗಳಿಂದ ಈ ಅವಕಾಶಕ್ಕೆ ಕಾಯುತ್ತಿದ್ದ ಜನ ನಿರಾಶರಾಗಿದ್ದಾರೆ.
ಹುಳಿಯಾರು ಗ್ರಾಮ ಪಂಚಾಯ್ತಿ |
ವ್ಯಾಪ್ತಿ: ಹುಳಿಯಾರು ಗ್ರಾ.ಪಂ ೧೩ ಬ್ಲಾಕ್ ಆಗಿ ವಿಂಗಡಣೆಯಾಗಿದ್ದು ಇದುವರೆಗಿನ ೩೩ ಜನ ಸದಸ್ಯರ ಬದಲು ಈ ಬಾರಿ ೩೯ ಮಂದಿ ಸದಸ್ಯರನ್ನೊಳಗೊಂಡಿದೆ. ಭೌಗೋಳಿಕ ವಿಸ್ತೀರ್ಣ ೨೮೯೯ ಎಕರೆ ೧೬ ಗುಂಟೆ ಇದ್ದು ಯಾಕೂಬ್ ಸಾಬ್, ಸೋಮಜ್ಜನಪಾಳ್ಯ,ಕಾಮಶೆಟ್ಟಿಪಾಳ್ಯ, ಕೋಡಿಪಾಳ್ಯ,ವಳಗೆರೆಹಳ್ಳಿ, ಕೆರೆಕೋಡಿ ತಿರುಮಲಾಪುರ, ಅಮಾನಿಕೆರೆ, ತಿಪಟೂರು ರಸ್ತೆಯನ್ನೊಳಗೊಂಡು ಚುನಾವಣಾ ಕ್ಷೇತ್ರದ ವ್ಯಾಪ್ತಿ ಹೊಂದಿದೆ.
ಹುಳಿಯಾರು ಹೋಬಳಿ ಕೇಂದ್ರವಾಗಿದ್ದರೂ ಸಹ ತಾಲ್ಲೂಕಿಗೂ ಮೀರಿ ವಹಿವಾಟು ನಡೆಸುತ್ತಿದೆ. ವ್ಯವಹಾರ ವಹಿವಾಟಿನಿಂದ ಚಿ.ನಾ.ಹಳ್ಳಿ ತಾಲ್ಲೂಕನ್ನೇ ಹಿಂದಿಕ್ಕಿರುವ ಹುಳಿಯಾರನ್ನು ತಾಲ್ಲೂಕು ಕೇಂದ್ರವಾಗಿಸಲು ಕಳೆದ ನಾಲ್ಕೈದು ವರ್ಷದಿಂದ ಒಂದೆಡೆ ಹೋರಾಟ ನಡೆದರೆ, ಮತ್ತೊಂದೆಡೆ ಸದ್ದಿಲ್ಲದೆ ಪ.ಪಂ. ಆಗಿಸಲು ಕ್ರಮ ನಡೆದಿತ್ತು.
ಅರ್ಹತೆ ಏನು : ಯಾವುದೇ ಒಂದು ಪಂಚಾಯ್ತಿಯನ್ನು ಪ.ಪಂ.ಯಾಗಿ ಮೇಲ್ದರ್ಜೆಗೇರಿಸಲು ಪುರಸಭೆಯ ಅಧಿನಿಯಮದ ಪ್ರಕಾರ ಗ್ರಾ.ಪಂ. ಜನಸಂಖ್ಯೆ 10,000ಕ್ಕೆ ಕಡಿಮೆಯಿಲ್ಲದಂತೆ ಹಾಗೂ 20,000ಕ್ಕೆ ಹೆಚ್ಚಿಲ್ಲದಂತೆ ಇರಬೇಕು. ಜನಸಾಂದ್ರತೆಯು ಆ ಪ್ರದೇಶದ ಒಂದು ಚ.ಕಿ.ಮೀ ವೀಸ್ತೀರ್ಣಕ್ಕೆ 400ಕ್ಕಿಂತ ಕಡಿಮೆ ಇಲ್ಲದಿರುವುದು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡವಾರು ಪ್ರಮಾಣ ಒಟ್ಟು ಉದ್ಯೋಗದ ಪ್ರಮಾಣದ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಇರಬೇಕು. ಈ ಹಿನ್ನೆಲೆಯಲ್ಲಿ ಹುಳಿಯಾರು ಗ್ರಾ.ಪಂ.ವ್ಯಾಪ್ತಿಯಲ್ಲಿ 2011ರ ಜನಗಣತಿ ಅನ್ವಯ 15,413 ಜನಸಂಖ್ಯೆ ಹೊಂದಿ ಈ ಸಾಲಿನಲ್ಲಿ ಅಂದಾಜು ಇಪ್ಪತ್ತು ಸಾವಿರ ಜನ ಸಂಖ್ಯೆ ತಲುಪಿರುವ ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ,ಕಳೆದ ಐದು ವರ್ಷಗಳಿಂದ ಈ ಬಗ್ಗೆ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
ಸದಸ್ಯರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ |
ಜಿಲ್ಲೆಯ ಇತರ ಗ್ರಾ.ಪಂ ಗಳಿಗಿಂತ ಹೋಲಿಸಿದಲ್ಲಿ ವಾರ್ಷಿಕ ಅಂದಾಜು ೫೦ಲಕ್ಷ ರೂರೆಗೂ ಆದಾಯ ಹೊಂದಿರುವ ಹುಳಿಯಾರು ಆದಾಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿಸುವ ನಿಟ್ಟಿನಲ್ಲಿ ಪೌರಾಡಾಳಿತ ನಿರ್ದೇಶನಾಲಯದ ಹತ್ತು ಹಲವು ದಾಖಲೆಗಳನ್ನು ತರಿಸಿಕೊಂಡರು ಸಹ ಪ್ರಗತಿ ಮಾನ್ಯ ಶೂನ್ಯ.
ಹುಳಿಯಾರನ್ನು ಪ.ಪಂಯನ್ನಾಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಗರಾಭಿವೃದ್ದಿ ಸಚಿವರಿಗೆ ನೀಡಿರುವ ನಡವಳಿ ಪತ್ರ. |
ಇಚ್ಚಾ ಶಕ್ತಿ ಕೊರತೆ: ಹುಳಿಯಾರು ಪ.ಪಂ ಆಗದಿರಲು ರಾಜಕೀಯ ಇಚ್ಚಾಶಕ್ತಿ ಕಾರಣ ಎನ್ನಲಾಗಿದೆ. ಶಾಸಕ ಸಿ.ಬಿ.ಸುರೇಶ್ ಬಾಬು ಈ ಬಗ್ಗೆ ಮುಂಚಿನಿಂದಲೂ ನಿರಾಸಕ್ತಿ ಹೊಂದಿದ್ದು ಉಸ್ತುವಾರಿ ಸಚಿವ ಜಯಚಂದ್ರ ಮಾತ್ರ ಆಸಕ್ತಿವಹಿಸಿದ್ದು ,ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಪೌರಾಡಾಳಿತ ಸಚಿವ ಖಮರುಲ್ಲಾ ಇಸ್ಲಾಂ ಅವರುಗಳಿಗೆ ಪಟ್ಟಣ ಪಂಚಾಯ್ತಿ ಮಾಡಲು ಒತ್ತಾಯಿಸಿದ್ದರು. ಇತ್ತೀಚೆಗೆ ಸಂಸದ ಮುದ್ದುಹನುಮೇಗೌಡರು ಸಹ ಈ ಬಗ್ಗೆ ಗಮನ ಹರಿಸಿದ್ದು ಪ.ಪಂ.ಆಗಿ ಮಾಡೇ ತಿರುವುದಾಗಿ ಘೋಷಣೆ ಮಾಡಿದ್ದು ಜನರ ನಂಬಿಕೆ ಹೆಚ್ಚು ಮಾಡಿತ್ತು.
ಹುಳಿಯಾರನ್ನು ಪ.ಪಂಯಾಗಿ ಮೇಲ್ದರ್ಜೇಗೇರಿಸುವಂತೆ ಗ್ರಾ.ಪಂ.ಯ ಸದಸ್ಯರ ನಿಯೋಗದಿಂದ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾಯೋಜನಾಧಿಕಾರಿ ಗೀತಾ ಅವರಿಗೆ ದಾಖಲೆಗಳ ಸಲ್ಲಿಕೆ |
ಚುನಾವಣೆ ಘೋಷಣೆಯಾಗುವವರೆಗು ಹುಳಿಯಾರು ಪ.ಪಂ. ಆಗೇ ತೀರುತ್ತದೆಂಬ ಭರವಸೆ ಹೊಂದಿದ್ದ ಇಲ್ಲಿನ ಜನತೆಗೆ ಇದೀಗ ಗ್ರಾ.ಪಂಯಾಗಿಯೇ ಮುಂದುವರೆದಿರುವುದು ಭ್ರಮನಿರಸನಕ್ಕೆ ಕಾರಣವಾಗಿದೆ. ಪ.ಪಂ ಆಗದಿರಲು ಹಾಲಿ ಇದ್ದ ಕೆಲವು ಸದಸ್ಯರ ರಾಜಕೀಯ ಆಕಾಂಕ್ಷೆಯೇ ಕಾರಣ ಎನ್ನುವ ಮಾತು ಸಹ ಕೇಳಿಬಂದಿದ್ದು, ಪ.ಪಂ ಆದಲ್ಲಿ ಸದಸ್ಯರ ಸಂಖ್ಯೆ ೩೩ರ ಬದಲು ೧೨ , ೧೩ರ ಆಸುಪಾಸಿಗೆ ಬರುವುದರಿಂದ ಕೆಲವರಿಗೆ ಅಧಿಕಾರ ದೊರೆಯದಿರುವುದರಿಂದ ಅವರುಗಳೇ ಇದಕ್ಕೆ ಅಡ್ಡಗಾಲು ಹಾಕಿರಬಹುದು ಎಂದು ಹೇಳಲಾಗುತ್ತಿದೆ.
ಜನಸಂಖ್ಯೆ ಅಧಾರದ ಮೇಳೆ ಹುಳಿಯಾರಿಗಿಂತ ಕಡಿಮೆ ಜನಸಂಖ್ಯೆಯಿರುವ ಅನೇಕ ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿದ್ದರೂ ಕೂಡ ಹುಳಿಯಾರಿಗೆ ಪಟ್ಟಣ ಪಂಚಾಯ್ತಿ ಆಗುವ ಭಾಗ್ಯ ಇಲ್ಲದಿರುವುದು ದುರಂತ. ಒಟ್ಟಾರೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಹುಳಿಯಾರು ಪ.ಪಂ ಆಗಲು ಮತ್ತೆ ೫ ವರ್ಷ ಕಾಯುವ ಅನಿವಾರ್ಯತೆ ಎದುರಾಗಿದೆ.
---------------------------------
ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ್ದರೆ ಇನ್ನೂ ಹೆಚ್ಚು ಅಭಿವೃದ್ದಿಯಾಗುತ್ತಿತ್ತು. ಕೇವಲ ಸದಸ್ಯರ ಸಂಖ್ಯೆ ಮಾತ್ರ ಜಾಸ್ತಿಯಾಗಿದ್ದು ಬಿಟ್ಟರೆ ಬೇರೆನೂ ಆಗಿಲ್ಲ .ಅಭಿವೃದ್ದಿ ದೃಷ್ಠಿಯಿಂದ ಹುಳಿಯಾರು ಗ್ರಾ.ಪಂ.ಯನ್ನು ಉನ್ನತೀಕರಿಸಿ ಪ.ಪಂ.ಯಾಗಿ ಮಾಡಬೇಕಾದ ಅವಶ್ಯಕತೆ ಇವತ್ತಿಗೂ ಕೂಡ ಇದ್ದೇಯಿದೆ
ಬಡಗಿರಾಮಣ್ಣ. ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ.
----------
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ