ವರದಿ:ಡಿ.ಆರ್.ನರೇಂದ್ರಬಾಬು
-------------
ಹುಳಿಯಾರು : ಪ್ರತಿಯೊಂದು ಗ್ರಾಮಗಳ ಹಿಂದೆ ಅವುಗಳದ್ದೇ ಆದ ಐತಿಹ್ಯವಿದ್ದು ಅದಕ್ಕೆ ತಕ್ಕಂತೆ ಕೆಲ ಕುರುಹುಗಳು ಇರುತ್ತವೆ. ಅಂತೆಯೇ ಹುಳಿಯಾರಿನ ಇತಿಹಾಸಕ್ಕೆ ಹೊಂದಿಕೊಂಡಂತಿರುವ ನಾಯಿಗಲ್ಲು ಹುಳಿಯಾರು ಕೆರೆ ಏರಿ ದಡದಲ್ಲಿದ್ದು ಅವನತಿಯತ್ತ ಸಾಗಿರುವ ಅದರ ಸಂರಕ್ಷಣೆ ಅತ್ಯಗತ್ಯವಾಗಿದೆ.
ಹುಳಿಯಾರಿನ ಇತಿಹಾಸ ನೆನಪಿಸುವ ನಾಯಿಗಲ್ಲು . |
ಹುಳಿಯಾರು ಹೆಸರಿಗೆ ಈ ನಾಯಿಗಲ್ಲು ತಳುಕು ಹಾಕಿಕೊಂಡಿದ್ದು ವೀರರ ಭೂಮಿಯಾಗಿದ್ದ ಈ ನೆಲದಲ್ಲಿ ನಾಯಿಯೂ ಸಹ ಹುಲಿಯನ್ನು ಎದುರಿಸಿದ್ದರಿಂದ ಹುಲಿ ಯಾರು ಎಂಬ ಪ್ರಶ್ನೆ ಹುಟ್ಟಿ ಹುಲಿಯಾರು ಎಂದು ಕರೆಯಲ್ಪಟ್ಟು ಕ್ರಮೇಣ ಹುಳಿಯಾರಾಗಿ ಬದಲಾಗಿದೆ ಎನ್ನುತ್ತದೆ ಇತಿಹಾಸ, ಇದರ ದ್ಯೋತಕವಾಗಿ ಮಾರನಾಯಕ ಆಳ್ವಿಕೆಯಲ್ಲಿ ಗ್ರಾಮದ ಕೆರೆಯಲ್ಲಿ ಕಲ್ಲೊಂದು ಸ್ಥಾಪಿಸಲ್ಪಟ್ಟು ಹುಲಿ ಹಾಗೂ ನಾಯಿ ಕದನವಾಡುತ್ತಿರುವ ದೃಶ್ಯ ಕೆತ್ತಲ್ಪಟ್ಟಿದೆ.
ನಾಯಿಗಲ್ಲಿನ ಐತಿಹ್ಯ : ಈ ನಾಯಿಗಲ್ಲಿನ ಇತಿಹಾಸ ಎಲ್ಲೂ ದಾಖಲಾಗದೆ ಕೇವಲ ಹಿರಿಯ ಬಾಯಲ್ಲೇ ಉಳಿದು ಕೊಂಡಿದ್ದು ಅಂತೆ, ಕಂತೆ ಎನ್ನುವಂತಾಗಿದೆ. ಕೆಲವರ ಪ್ರಕಾರ ಹುಳಿಯಾರು ಕೆರೆ ಕೋಡಿ ಬೀಳುವ ಮುನ್ಸೂಚನೆಯ ಸೂಚಕದ ಕಲ್ಲು ಇದಾಗಿದ್ದು, ಈ ನಾಯಿಗಲ್ಲ ನೆತ್ತಿಯವರೆಗೆ ನೀರು ಬಂತೆಂದರೆ ಕೆರೆ ಕೋಡಿ ಬೀಳುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಅಲ್ಲದೆ ಈ ಕಲ್ಲಿನ ಮೇಲೆ ಕಾಗೆಯೊಂದು ನೀರು ಕುಡಿಯಲು ಕುಳಿತಾಗ ಅದರ ಕೊಕ್ಕಿಗೆ ನೀರು ಸಿಕ್ಕಿದರೆ ಆಗಲೂ ಸಹ ಕೆರೆ ಕೋಡಿ ಬೀಳುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಾರೆ ಈ ನಾಯಿಗಲ್ಲು ಕೆರೆಯ ನೀರಿನ ಮಟ್ಟವನ್ನು ತಿಳಿಸುವಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿದ್ದಂತಹ ಕುರುಹಾಗಿದೆ ಎಂದು ಕೆಲ ಹಿರಿಯರ ಅಭಿಪ್ರಾಯವಾಗಿದೆ.
ಮತ್ತೆ ಕೆಲವರು ಹೇಳುವಂತೆ ಈ ಹಿಂದೆ ಹುಳಿಯಾರಿನ ಸುತ್ತ ಬೃಹತ್ ಕೋಟೆಯಿದ್ದು ಒಮ್ಮೆ ಬೇಟೆಯ ಸಂದರ್ಭದಲ್ಲಿ ಬೇಟೆಗಾರನ ಜೊತೆಯಲ್ಲಿದ್ದ ನಾಯಿಯೊಂದು ಹುಲಿಯನ್ನು ಬೆನ್ನಟ್ಟಿಕೊಂಡು ಬಂದಾಗ ಹುಲಿ ನಾಯಿಗೆ ಹೆದರಿ ಕೋಟೆಯನ್ನು ಹಾರಿತು. ಅದರ ನೆನಪಾಗಿ ನಾಯಿಗಲ್ಲನ್ನು ಕೆತ್ತಿಸಿ ಕೆರೆಯ ಜಾಗದಲ್ಲಿ ಸ್ಥಾಪಿಸಿದ್ದಾರೆ ಎನ್ನುತ್ತಾರೆ. ಈ ರೀತಿಯ ಹತ್ತಾರೂ ಮಾರ್ಮಿಕ ಐತಿಹ್ಯಗಳು ಈ ನಾಯಿಗಲ್ಲಿಗಿದೆ.
ಕಾಲಕ್ರಮೇಣ ಕೆರೆ ಜಾಗ ಒತ್ತುವರಿಯಾಗಲ್ಪಟ್ಟು ಈ ಕಲ್ಲು ಕೂಡ ಜನರ ನೆನಪಿನಿಂದ ಮಾಸುತ್ತಾ ಬಂದು ಸುಮಾರು ಐದಾರು ಅಡಿಯಷ್ಟಿರುವ ನಾಯಿಗಲ್ಲು ಮಣ್ಣುಮುಚ್ಚಿಕೊಂಡು ಒಂದರಿಂದ ಎರಡು ಅಡಿಯಷ್ಟು ಮಾತ್ರ ಗೋಚರಿಸುತ್ತಿದೆ. ಇದರ ಸುತ್ತಮುತ್ತ ತ್ಯಾಜ್ಯದ ರಾಶಿಯೇ ಬಿದ್ದಿದ್ದು ಇದನ್ನು ಕಂಡವರು ಇದು ಎಂಥದೋ ಕಲ್ಲು ಎಂಬ ಭಾವ ಹುಟ್ಟಿಸುತ್ತಿದೆ. ಆದರೆ ಇದೀಗ ಬಸ್ ನಿಲ್ದಾಣದ ಅಂಗಡಿಗಳೆಲ್ಲಾ ತೆರವಾಗಿ ಕೆರೆಜಾಗ ವಿಶಾಲವಾಗಿದ್ದು ಪ್ರತಿಯೊಬ್ಬರ ಕಣ್ಣಿಗೆ ನಾಯಿಗಲ್ಲು ಕಾಣಿಸುತ್ತಿದೆಯಾದ್ದರಿಂದ ಕೆಲವರು ಸಂರಕ್ಷಣೆಗೆ ಮುಂದಾಗಿದ್ದು ಇದನ್ನು ಎಲ್ಲಿ ಹೇಗೆ ಸಂರಕ್ಷಿಸಬೇಕೆಂಬುದು ಪ್ರಶ್ನೆಯಾಗಿದೆ.
ಇಲಾಖೆಯವರಾಗಲಿ, ಗ್ರಾ.ಪಂ.ನವರಾಗಲಿ, ಸಾರ್ವಜನಿಕರಾಗಿರಲಿ ನಾಯಿಗಲ್ಲಿನ ಕಡೆ ತಿರುಗಿ ನೋಡದೆ ಮಣ್ಣಿನಲ್ಲಿ ಹುದುಗುತ್ತಿದ್ದ ಹಿನ್ನಲೆಯಲ್ಲಿ ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ನಮ್ಮಊರಿನ ಇತಿಹಾಸ ಹೇಳುವ ಕುರುಹನ್ನು ನಾವೇ ಸಂರಕ್ಷಣೆ ಮಾಡುತ್ತೇವೆ.ಅದನ್ನು ಕಾಲೇಜಿನ ಕ್ಯಾಂಪಸ್ ನಲ್ಲಿ ಇಡುವುದಾಗಿ ಅದನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ ಇಲ್ಲಿನ ಸ್ಥಳಿಯರಾದ ಮೋಹನ್ ಕುಮಾರ್ ರೈ, ಲಿಂಗಪ್ಪನಪಾಳ್ಯದ ನಾಗರಾಜು, ಹೋಟೆಲ್ ಪರಪ್ಪ , ಮೂರ್ತಿ ಸೇರಿದಂತೆ ಇತರರು ಇದನ್ನು ವಿರೋಧಿಸಿದ್ದು ಇತಿಹಾಸ ಸಾರುವ ಕಲ್ಲು ಎಲ್ಲಿಗೂ ತೆಗೆದುಕೊಂಡು ಹೋಗುವುದು ಬೇಡ ನಾಯಿಗಲ್ಲು ಇರುವ ಜಾಗದಲ್ಲೇ ಅದನ್ನು ಸಂರಕ್ಷಣೆ ಮಾಡಬೇಕಿದೆ ಎಂದು ವಿದ್ಯಾರ್ಥಿಗಳನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಸದ್ಯ ಕಲ್ಲಿನ ಸುತ್ತಾ ಸ್ವಚ್ಚ ಮಾಡಿದ್ದು ಅಲ್ಲೊಂದು ಸ್ಮಾರಕ ನಿರ್ಮಾಣ ಮಾಡುವ ಯೋಜನೆ ಹೊಂದಿರುವುದಾಗಿ ಮೋಹನ್ ಕುಮಾರ್ ರೈ ತಿಳಿಸುತ್ತಾರೆ.
ಒಟ್ಟಾರೆ ಆಧುನಿಕತೆಯ ಹೆಸರಲ್ಲಿ ಇತಿಹಾಸ ನೆನಪನ್ನು ಸಾರುವ ಅನೇಕ ಕುರುಹುಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು ಇಂತಹ ಕುರುಹುಗಳ ರಕ್ಷಣೆಗೆ ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಆಡಳಿತದವರು ಮುಂದಾಗಬೇಕಿದೆ ಎಂಬುದು ಸ್ಥಳೀಯರ ಬಿನ್ನಹ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ