ವಿಷಯಕ್ಕೆ ಹೋಗಿ

ಉತ್ತಮ ಮಳೆ : ಹೆಸರು ಬಿತ್ತನೆಗೆ ಚಾಲನೆ

ವರದಿ : ಡಿ.ಆರ್.ನರೇಂದ್ರಬಾಬು.
ಹುಳಿಯಾರು: ಹೋಬಳಿ ವ್ಯಾಪ್ತಿಯ ಕೆಂಕೆರೆ, ಗಾಣಧಾಳು,ರಂಗನಕೆರೆ,ದಸೂಡಿ,ದಬ್ಬಗುಂಟೆ, ಹೊಯ್ಸಳಕಟ್ಟೆ ಸೇರಿದಂತೆ ಬಹುತೇಕ ಕಡೆ ಈ ಬಾರಿ ಉತ್ತಮ ಪೂರ್ವ ಮುಂಗಾರು ಮಳೆಯಿಂದಾಗಿ ಬಿತ್ತನೆ ಕಾರ್ಯ ಚುರುಕಾಗಿದೆ. ಕಳೆದೊಂದು ತಿಂಗಳಿಂದ ಜಾತ್ರೆ,ಹಬ್ಬ ಹರಿದಿನಗಳಲ್ಲಿ ತೊಡಗಿಕೊಂಡಿದ್ದ ರೈತರು , ಉತ್ತಮ ಮಳೆಯಾಗಿರುವುದರಿಂದ ತಮ್ಮ ಹೊಲಗಳತ್ತ ಮುಖಮಾಡಿ ಉತ್ತುಬಿತ್ತುವ ಕಾರ್ಯದಲ್ಲಿ ಮುಂದಾಗಿದ್ದಾರೆ.
ಹೆಸರನ್ನು ಪೂರ್ವ ಮುಂಗಾರಿನಲ್ಲಿ ಬೆಳೆಯುವ ವಾಡಿಕೆಯಿದ್ದು ಸುಮಾರು 2-3 ಬಾರಿ ಉತ್ತಮ ಹದಮಳೆ ಬಂದಿರುವುದರಿಂದ ಕೆಲವರು ತಮ್ಮ ಹೊಲಗಳ ಸ್ವಚ್ಚತೆಯಲ್ಲಿ ತೊಡಗಿದರೆ ಮತ್ತೆ ಕೆಲವರು ಹೆಸರು ಬಿತ್ತನೆಗೆ ಮುಂದಾಗಿದ್ದಾರೆ.
ಯಳನಡು,ಕೋರಗೆರೆ,ತಿಮ್ಲಾಪುರ,ಸೀಗೆಬಾಗಿ ಗ್ರಾಮಗಳ ರೈತರು ತಮ್ಮ ಹೊಲಗಳಲ್ಲಿ ಬೇಸಾಯ ಮಾಡಿ ಹೊಲಗಳನ್ನು ಸ್ವಚ್ಚಮಾಡಿಕೊಂಡಿದ್ದು ಸೊನೆಮಳೆ ಬಂದರೆ ಸಾಕು ಬಿತ್ತನೆ ಮಾಡಲು ಕಾದುಕೂತಿದ್ದಾರೆ. ಗುರುವಾರ ರಾತ್ರಿ ಗುರುವಾಪುರ,ಮೇಲನಹಳ್ಳಿ,ಸೋಮನಹಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಉತ್ಸಾಹದಿಂದ ಹೆಸರು ಬಿತ್ತನೆಗೆ ಮುಂದಾಗಿದ್ದಾರೆ.
ಹುಳಿಯಾರು ಹೋಬಳಿ ರಂಗನಕೆರೆ ಬಳಿ ಉಳುಮೆಯಲ್ಲಿ ತೊಡಗಿರುವ ರೈತ.
ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರ ಕೊರತೆ ಹಾಗೂ ರೈತರ ಬಳಿ ದನಗಳ ಸಂಖ್ಯೆ ಕೂಡ ಇಳಿಮುಖವಾಗಿರುವುದರಿಂದ ಉಳುಮೆಗಾಗಿ ಟ್ರಾಕ್ಟರ್ ಗಳ ಮೊರೆ ಹೋಗುತ್ತಿದ್ದಾರೆ. ೪೫ ದಿನಗಳ ಬೆಳೆಯಾದ ಹೆಸರು ಜೂನ್ ತಿಂಗಳೊಳಗೆ ಕೈ ಸೇರಲಿದೆ.ಪೂರ್ವ ಮುಂಗಾರಿನಲ್ಲಿ ಬೇಗ ಬಿತ್ತನೆ ಮಾಡುವುದರಿಂದ ಬೆಳೆ ಕಟಾವಿನ ನಂತರ ಮತ್ತೊಂದು ಬೆಳೆ ಮಾಡಬಹುದು ಎನ್ನುತ್ತಾರೆ ಅನುಭವಿ ರೈತರು.
ಸದ್ಯ ರೈತರು ಬೀಜ ಹಾಗೂ ರಸಗೊಬ್ಬರ ಖರೀದಿಗೆ ತೊಡಗಿದ್ದು, ಕೆಲ ರೈತರು ಮುಂದಿನ ಬೆಳೆಗೆಂದು ಉಳಿಸಿಕೊಂಡಿದ್ದ ಬೀಜವನ್ನು ಬಿತ್ತನೆಗೆ ಬಳಸುತ್ತಿದ್ದರೆ ಮತ್ತೆ ಕೆಲ ರೈತರು ರೈತ ಸಂಪರ್ಕ ಕೇಂದ್ರದತ್ತ ಮುಖಮಾಡಿದ್ದಾರೆ. ಕೃಷಿ ಇಲಾಖೆ ಈಗಾಗಲೇ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಹಾಗೂ ಜೈವಿಕ ಗೊಬ್ಬರ ಪೂರೈಕೆ ಮಾಡುತ್ತಿದೆ. ಹುಳಿಯಾರಿನ ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರ ೩೯೦ರೂ ಗೆ ೫ ಕೆಜಿ ಬಿತ್ತನೆ ಹೆಸರುಕಾಳು ಬೀಜ ನೀಡುತ್ತಿದ್ದು ಪಹಣಿ ಮತ್ತು ಐಡಿ ಕಾರ್ಡ್ ತಂದು ಪಡೆಯಬಹುದಾಗಿದೆ.
ಮಳೆ ಬರುವುದಕ್ಕೂ ಮೊದಲೆ ಗೊಬ್ಬರದ ಅಂಗಡಿಯವರು ರಸಗೊಬ್ಬರದ ದಾಸ್ತಾನಿಗೆ ಮುಂದಾಗಿದ್ದರಿಂದ ಎಲ್ಲೂ ಗೊಬ್ಬರದ ಕೊರತೆ ಕಾಣದೆ ದಂಡಿಯಾಗಿ ರಸಗೊಬ್ಬರ ದೊರೆಯುತ್ತಿದೆ. ಜಿಂಕ್, ಕ್ಯಾಲ್ಸಿಯಂ,ಬೋರಾನ್,ಜಿಪ್ಸಂ ಅವಶ್ಯಕತೆಯಿದ್ದು ರೈತಸಂಪರ್ಕ ಕೇಂದ್ರದಲ್ಲಿ ಬೋರಾನ್ ,ಬಿಪ್ಸಂ ಮಾತ್ರ ಲಭ್ಯವಿದ್ದು ಉಳಿದ ಗೊಬ್ಬರವನ್ನು ಶೀಘ್ರವೇ ವ್ಯವಸ್ಥೆ ಮಾಡಬೇಕಿದೆ.
ಕಳೆದ ಬಾರಿ ಕಾಯಿ ಹಿಡಿದು,ಬಲಿಯುವ ಸಮಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಕೆಲ ರೈತರಿಗೆ ಹೆಸರು ಕೈಹತ್ತಲಿಲ್ಲ. ವಾಡಿಕೆಯಂತೆ ಅಶ್ವಿನಿ,ಭರಣೆ ಮಳೆಗೆ ಮುಂಗಾರು ಬಿತ್ತನೆ ಪ್ರಾರಂಭಗೊಳ್ಳುವುದಿದ್ದು , ಇದೀಗ ರೈತರು ಮುಂಚಿತವಾಗಿಯೇ ಬಿತ್ತನೆ ಮಾಡಿದ್ದಾರೆ. ಇದೀಗ ಅಶ್ವಿನಿ ಮಳೆ ಪ್ರಾರಂಭವಾಗಿದ್ದು ಮುಂದಿನ್ನು ಭರಣಿ,ಕೃತಿಕಾ,ರೋಹಿಣಿ, ಮೃಗಶಿರಾ ಮಳೆಗಳಿದ್ದು ಬಿತ್ತನೆ ಮಾಡಿರುವ ಬೆಳೆಗೆ ಮಳೆ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ ಎಂಬ ನಂಬಿಕೆ ರೈತರಲ್ಲಿ ಮನೆ ಮಾಡಿದೆ.ಮುಂದಿನಗಳಲ್ಲಿ ಮಳೆ ಉತ್ತಮವಾಗಿ ಬಂದರೆ ಹೆಸರು ಹುಲುಸಗಿ ಬೆಳೆದು ರೈತರ ಬಾಳನ್ನು ಹಸನು ಮಾಡಲಿದೆ.
----------
ಬಿತ್ತನೆಗೂ ಮುಂಚೆ ಹೆಸರುಕಾಳಿನ ಬೆಲೆ ಕೆಜಿಗೆ ೭೫ ರಿಂದ ೮೦ ಇದ್ದರೆ, ಬೆಳೆ ಬಂದ ಸಮಯದಲ್ಲಿ ದಿಢೀರ್ ಅಂತ ಕಡಿಮೆಯಾಗುತ್ತದೆ. ಹಾಕಿದ ಬೀಜ,ಗೊಬ್ಬರ,ಬೇಸಾಯದ ಕೂಲಿ ಇವನೆಲ್ಲ ಕಳೆದು ಉಳಿಯೋದು ಮಾತ್ರ ತೀರಾ ಕಡಿಮೆನೆ. ಈ ಬಾರಿಯಾದರೂ ಸಕಾಲಕ್ಕೆ ಮಳೆಬಂದಲ್ಲಿ ಒಂದಿಷ್ಟು ಹೆಸರುಕಾಳನ್ನು ದಾಸ್ತಾನು ಮಾಡುತ್ತೇವೆ : ಕೆಂಕೆರೆಯ ಕರೆಸಿದ್ದಯ್ಯನ ಚಂಬಣ್ಣ., ರೈತ .
--------

ಈ ಭಾಗದ ಹೆಸರುಕಾಳಿಗೆ ಗುಜರಾತ್, ಆಂಧ್ರಪ್ರದೇಶ, ರಾಜಸ್ತಾನ, ಹರಿಯಾಣ,ಪಶ್ಚಿಮ ಬಂಗಾಳ,ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಇಲ್ಲಿನ ಎಪಿಎಂಸಿ ಯಲ್ಲಿ ಹೆಚ್ಚಿನ ಪ್ರಮಾಣದ ಹೆಸರು ಖರೀದಿ ಆಗುತ್ತದೆ: ಬಾಲಾಜಿ, ರವಾನೆದಾರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...