ವರದಿ ; ಡಿ.ಆರ್.ನರೇಂದ್ರಬಾಬು
------
ಹುಳಿಯಾರು : ಮಧ್ಯದಂಗಡಿ ಸ್ಥಳಾಂತರಗೊಳಿಸುವ ವಿಚಾರವಾಗಿ ಖುದ್ದು ಅಬ್ಕಾರಿ ಡಿಸಿಯವರೆ ಸ್ಥಳ ಪರಿಶೀಲನೆ ಮಾಡಿ,ದೇವಾಲಯಗಳಿಂದ ಮಧ್ಯದಂಗಡಿವರೆಗಿನ ದೂರವನ್ನು ಸಾರ್ವಜನಿಕರ ಸಮಕ್ಷಮದಲ್ಲಿ ಮರುಅಳತೆ ಮಾಡಿ ಸ್ಥಳಾಂತರಕ್ಕೆ ಅಂತಿಮ ಗಡುವು ನೀಡಿ ಅದೇಶ ಹೊರಡಿಸಿದ್ದರೂ ಸಹ ಇದೀಗ ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡಿ,ಮರುಆಳತೆ ಮಾಡುವಂತೆ ಆಬಕಾರಿ ಆಯುಕ್ತರು ನೋಟೀಸ್ ಸೂಚಿಸಿರುವುದು ಸಾರ್ವಜನಿಕರ ಅಸಹನೆಗೆ ಕಾರಣವಾಗಿದೆ.
ಪಟ್ಟಣದ ಹೃದಯಭಾಗದಲ್ಲಿರುವ ದಿ ಟೌನ್ ಕೋಪರೇಟಿವ್ ಸೊಸೈಟಿಯ ಕಟ್ಟಡದಲ್ಲಿರವ ರಂಗನಾಥ ಲಿಕ್ಕರ್ ಷಾಪ್ ಅಬಕಾರಿ ನಿಯಮ ಉಲ್ಲಂಘಿಸಿ ಸಾರ್ವಜನಿಕ ಆಕ್ಷೇಪಣಾರ್ಹ ಸ್ಥಳದಲ್ಲಿದ್ದು ಇದನ್ನು ತೆರವುಗೊಳ್ಳಿಸಬೇಕೆಂದು ಕಟ್ಟಡದ ಮಾಲೀಕರಾದ ಟೌನ್ ಕೋಅಪರೇಟಿವ್ ಸೊಸೆ‘ಟಿಯವರು ೨೦೦೨ ರಿಂದ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರು.ಇವರೊಂದಿಗೆ ಗ್ರಾಮದೇವತೆ ಹುಳಿಯಾರಮ್ಮ ದೇವಸ್ಥಾನ ಸಮಿತಿ,ರಂಗನಾಥಸ್ವಾಮಿ ದೇವಾಲಯ ಟ್ರಸ್ಟ್,ಬೀರಲಿಂಗೇಶ್ವರ ದೇವಾಲಯ ಸಮಿತಿ , ಸೀತಾರಾಮ ಪ್ರತಿಷ್ಠಾನ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ ಘಟಕ,ಜಯಕರ್ನಾಟಕ ಘಟಕ, ರೈತಸಂಘದವರು, ಪಂಚಾಯ್ತಿ ಸದಸ್ಯರು ಸಹ ಸೊಸೈಟಿಯ ಹೋರಾಟಕ್ಕೆ ಕೈಜೋಡಿಸಿದ್ದರು.
ಹುಳಿಯಾರಿನಲ್ಲಿ ಅಕ್ಷೇಪಣಾರ್ಹ ಸ್ಥಳದಲ್ಲಿನ ಮದ್ಯದಂಗಡಿಯಿಂದ ದೇವಾಲಯಗಳಿರುವ ಅಂತರವನ್ನು ಖುದ್ದು ಅಬಕಾರಿ ಡಿಸಿ ಅವರೆ ಈ ಹಿಂದೆ ಅಳತೆ ಮಾಡಿಸಿದ್ದು. |
ದೇವಾಲಯಗಳ ಭಕ್ತರ ಹಾಗೂ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡುತ್ತಿರುವ ರಂಗನಾಥ ಲಿಕ್ಕರ್ ಷಾಪ್ ಜನನಿಬಿಡ ಹಾಗೂ ಆಕ್ಷೇಪಣಾರ್ಹ ಸ್ಥಳದಲ್ಲಿದ್ದೂ ಇದನ್ನು ಮುಂದಿನ ಅವಧಿಗೆ ನವೀಕರಿಸದೆ ಸ್ಥಳಾಂತರಿಸಬೇಕೆಂದು ಕಾನೂನು ಹೋರಾಟ ನಡೆದಿತ್ತು.
ಅಬಕಾರಿ ನಿಯಮದ ಅನ್ವಯ ದೇವಾಲಯಗಳಿಂದ ೧೦೦ ಮೀ ಒಳಗೆ ಹಾಗೂ ರಾಷ್ಟ್ರೀಯಹೆದ್ದಾರಿಯಿಂದ ೨೨೦ ಮೀ ಒಳಗೆ ಯಾವುದೇ ಮದ್ಯದಂಗಡಿ ಇರಬಾರದೆಂಬ ನಿಯಮವನ್ನು ಎತ್ತಿ ಹಿಡಿದು ಸನ್ನದನ್ನೇ ರದ್ದು ಪಡಿಸಬೇಕೆಂದು ಅಬಕಾರಿ ಸಚಿವರವರೆಗೂ ಪ್ರಕರಣ ಸಾಗಿತ್ತು.
ಅಂತರ ಎಷ್ಟಿದೆ: ಈ ಮದ್ಯದಂಗಡಿಯಿಂದ ೪೬.೪ ಮೀ ಅಂತರದಲ್ಲಿ ಗ್ರಾಮದೇವತೆ ಹುಳಿಯಾರಮ್ಮ ದೇವಿ ದೇವಾಲಯ, ೯೬.೩ ಮೀ ಅಂತರದಲ್ಲಿ ಮುಜರಾಯಿಗೆ ಸೇರಿದ ಪುರಾಣ ಪ್ರಸಿದ್ದ ಶ್ರೀರಂಗನಾಥಸ್ವಾಮಿ ಸನ್ನಿಧಿ, ೯೩.೭ ಮೀ ದೂರದಲ್ಲಿ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಹಾಗೂ ೧೧೬ ಮೀ ಅಂತರದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿಯಿಂದ ೧೧೬ ಮೀ ಅಂತರದಲ್ಲಿದೆ.ಈ ಪ್ರಕಾರ ಕರ್ನಾಟಕ ಅಬಕಾರಿ ಸನ್ನದುಗಳು ೧೯೬೭ ನಿಯಮ ೫ರಂತೆ ಅಕ್ಷೇಪಣಾ ಸ್ಥಳವಾಗಿದೆ.
ಇದೀಗ ಮತ್ತೆ ಮರು ಅಳತೆ ಹಾಲಿ ಅಬಕಾರಿ ಉಪ ಆಯುಕ್ತರು ಕಳುಹಿಸಿರುವ ಸೂಚನಾ ಪತ್ರ. |
ಹುಳಿಯಾರಮ್ಮ ದೇವಾಲಯ ಮದ್ಯದಂಗಡಿಯಿಂದ ೪೬.೪ ಮೀ ಅಂತರದಲ್ಲಿದ್ದರೂ ಸಹ ದೇವಾಲಯ ಸಮಿತಿಯು ನಿಯಮಾನುಸಾರ ನೋಂದಣಿಯಾಗಿಲ್ಲ ಎನ್ನುತ್ತಾ ಅಲ್ಲದೆ ರಂಗನಾಥಸ್ವಾಮಿ ದೇವಾಲಯಕ್ಕೂ ಮಧ್ಯದಂಗಡಿಗೂ ಅಂತರ 100 ಮೀಟರ್ ಗೂ ಹೆಚ್ಚಿದೆ ಎಂದು ಮದ್ಯದ ಅಂಗಡಿಯವರು ನೀಡಿದ್ದ ತಪ್ಪು ಮಾಹಿತಿಯನ್ನೆ ಪರಿಗಣಿಸುತ್ತ ಸನ್ನದುದಾರರ ಪರವಾನಿಗೆ ನವೀಕರಿಸುತ್ತ ಬಂದಿದ್ದು ಸಮಸ್ಯೆಗೆ ಕಾರಣವಾಗಿತ್ತು.
ದೂರು ಪ್ರತಿದೂರು, ಹೇಳಿಕೆ ಪ್ರತಿಹೇಳಿಕೆ ಇವುಗಳೆಲ್ಲಾ ವಿಚಾರಣೆ ನಡೆದು ಅಬಕಾರಿ ಡಿಸಿಯವರೇ ಖುದ್ದು ಸ್ಥಳಕ್ಕೆ ಬಂದು ಆಳತೆ ಮಾಡಿ ಅಳತೆಯ ವಿಡೀಯೋ ಚಿತ್ರಿಕರಿಸಿ ತಹಸೀಲ್ದಾರ್ ವರದಿ, ತಾಲ್ಲೂಕು ಹಾಗೂ ಜಿಲ್ಲಾ ನೊಂದಣಾಕಾರಿಗಳ ವರದಿ, ಚಿ.ನಾ.ಹಳ್ಳಿ ಅಬಕಾರಿ ನಿರೀಕ್ಷಕರ ವರದಿ,ತಿಪಟೂರು ಅಬಕಾರಿ ಉಪನಿರೀಕ್ಷಕರ ವರದಿ, ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಇವರುಗಳ ವರದಿ ಆದರಿಸಿ ಅಂತಿಮವಾಗಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಡಿಸೆಂಬರ್ ೨೮ರ ಒಳಗೆ ಬೇರೊಂದು ನಿರಾಕ್ಷೇಪಣಾ ಸ್ಥಳಕ್ಕೆ ಸ್ಥಳಾಂತರಿಸಲು ಆದೇಶ ಹೊರಡಿಸಿದ್ದರು.
ಲಿಕ್ಕರ್ ಷಾಪ್ ಗೂ ಹಾಗೂ ರಂಗನಾಥ ಸ್ವಾಮಿ ದೇವಾಲಯಕ್ಕೂ ನೂರು ಮೀಟರ್ ಗೂ ಹೆಚ್ಚು ಅಂತರವಿದೆ ಎನ್ನುವ ಸನ್ನದುದಾರರು ಈ ಬಗ್ಗೆ ಮತ್ತೆ ತಕರಾರು ತೆಗೆದಿದ್ದರಿಂದ ಇದೀಗ ಅಂತಿಮವಾಗಿ ಅಬ್ಕಾರಿ ಆಯುಕ್ತರು ಮತ್ತೊಮ್ಮೆ ಸ್ಥಳ ಪರೀಕ್ಷೆ ಹಾಗೂ ಮರುಅಳತೆಗೆ ಸೂಚಿಸಿದ್ದಾರೆ.ಏಪ್ರಿಲ್ ೧೭ ರಂದು ಮರುಅಳತೆ ನಡೆಯಲಿದ್ದು ಮುಂದೇನಾಗಲಿದೆ ಎನ್ನುವ ಕುತುಹಲಕ್ಕೆ ಕಾರಣವಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ