ವಿಷಯಕ್ಕೆ ಹೋಗಿ

ರಾಗಿ ಖರೀದಿ ಕೇಂದ್ರ ಭಣಭಣ : ರೈತರಿಗಾಗಿ ಕಾಯುತ್ತಿರುವ ಅಧಿಕಾರಿಗಳು

ವರದಿ:ಡಿ.ಆರ್.ನರೇಂದ್ರಬಾಬು
ಹುಳಿಯಾರು : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉತ್ತಮ ಗುಣಮಟ್ಟದ ರಾಗಿ ಖರೀದಿಸಲು ಜನವರಿ ೮ ರಿಂದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಿದ್ದರೂ ಸಹ ರೈತರು ಖರೀದಿ ಕೇಂದ್ರದತ್ತ ಮುಖಮಾಡದಿರುವುದು ರೈತರ ಹಿತಕಾಯುವ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆ ಉದ್ಘವವಾಗಿದೆ.ಪಟ್ಟಣದ ಎಪಿಎಂಸಿ ಯಲ್ಲಿ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರ ರೈತರಿಲ್ಲದೆ ಬಣಗುಡುತ್ತಿದ್ದು, ಇಲ್ಲಿನ ಅಧಿಕಾರಿಗಳು ರಾಗಿ ಮಾರಲು ಬರುವ ರೈತರನ್ನು ಎದುರು ನೋಡುತ್ತಾ ಕುಳಿತಿದ್ದಾರೆ.
ಹುಳಿಯಾರು ಎಪಿಎಂಸಿಯಲ್ಲಿ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರದ ಮುಂದೆ ಕಾಣದಿರುವ ರೈತರು.
ರಾಗಿ ಖರೀದಿ ಕೇಂದ್ರವನ್ನು ಹುಳಿಯಾರು ಮತ್ತು ಚಿ.ನಾ.ಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿದ್ದು, ಖರೀದಿಗೆ ಗೋದಾಮು ಸೇರಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಸದ್ಯ ರಾಗಿಗೆ ಮಾರುಕಟ್ಟೆ ದರ ಕ್ವಿಂಟಾಲ್ ೧೨೦೦ ರಿಂದ ೧೪೦೦ರೂ ಇದ್ದು ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್ ಗೆ ಬೆಂಬಲ ಬೆಲೆ ಸೇರಿ ೨೦೦೦ರೂ ನೀಡಲಾಗುವುದಿದ್ದು, ಕ್ವಿಂಟಾಲ್ ಗೆ ೫೦೦ರಿಂದ ೬೦೦ರೂ ವ್ಯತ್ಯಾಸವಿದ್ದರೂ ಸಹ ಅದೇಕೋ ರೈತರು ಮಾತ್ರ ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗುತ್ತಿಲ್ಲ.
ಕೇಂದ್ರ ಪ್ರಾರಂಭಿಸಲು ಪ್ರತಿಭಟನೆ ಹಾದಿ ಹಿಡಿದಿದ್ದ ರೈತಸಂಘದವರು ಕೇಂದ್ರ ಪ್ರಾರಂಭದ ನಂತರ ಇತ್ತ ಅಡ್ಡ ಸುಳಿದಿಲ್ಲ , ಆಹಾರ ನಿಗಮದ ಅಧಿಕಾರಿಗಳು ಹಾಗೂ ಗ್ರೇಡ್ ನಿಗದಿ ಮಾಡುವ ಪರೀಕ್ಷಕರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮಾತ್ರ ದಿನಂಪ್ರತಿ ಹಾಜರಾಗುತ್ತಿದ್ದು, ಖರೀದಿ ಕೇಂದ್ರದಲ್ಲಿ ವ್ಯವಹಾರ ಮಾತ್ರ ನಡೆಯುತ್ತಿಲ್ಲ.
ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು ೮೫೦೦ ಹೆಕ್ಟೇರ್ ಪ್ರದೇಶದಲ್ಲಿ ಹುಳಿಯಾರು, ದೊಡ್ಡಬಿದರೆ,ತಿಮ್ಲಾಪುರ,ಯಳನಡು,ಕೆಂಕೆರೆ,ಗಾಣಧಾಳು,ದಸೂಡಿ,ಬರಕನಹಾಲ್,ಕೋರಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗುರಿ ಮೀರಿ ಬೆಳೆ ಬಂದಿದೆ. ಎಕರೆಗೆ ಮೂರು ಕ್ವಿಂಟಾಲ್ ಬೆಳೆಯುತ್ತಿದ್ದವರು ಈಬಾರಿ ನಾಲ್ಕರಿಂದ ಐದು ಕ್ವಿಂಟಾಲ್ ರಾಗಿ ಬೆಳೆದಿದ್ದಾರೆ. ಈ ಲೆಕ್ಕಾಚಾರದಲ್ಲಿ ಖರೀದಿ ಕೇಂದ್ರಕ್ಕೆ ಭರ್ತಿ ರೈತರು ಆಗಮಿಸಿ ರಾಗಿ ಮಾರಬೇಕಿದ್ದರೂ ಖರೀದಿ ಕೇಂದ್ರದತ್ತ ಸುಳಿಯದಿರುವುದು ನಿಗೂಢವಾಗಿದೆ.
ಸಮಸ್ಯೆ ಏನು : ಕೇಂದ್ರಕ್ಕೆ ರಾಗಿ ಮಾರಾಟ ಮಾಡಬೇಕಾದಲ್ಲಿ ಪ್ರಸಕ್ತ ವರ್ಷದ ಬೆಳೆ ದಾಖಲಾಗಿರುವ ಪಹಣಿ,ಕೃಷಿ ಇಲಾಖೆಯಿಂದ ಪಡೆದ ರಾಗಿ ಇಳುವರಿ ದೃಢೀಕರಣಪತ್ರ ಹಾಜರು ಪಡಿಸಬೇಕು ರಾಗಿ ಮಾದರಿಯನ್ನು ಕೊಂಡೊಯ್ದು ದೃಢೀಕರಿಸಿಕೊಳ್ಳಬೇಕು, ಮಾರುವ ರಾಗಿ ಸದೃಢವಾಗಿದ್ದು ಸ್ವಚ್ಚವಾಗಿರಬೇಕು. ಸೀಕಲು ಹಾಗೂ ಕಪ್ಪುಕಾಳು ರಹಿತವಾಗಿ ಸರ್ಕಾರದ ನಿಯಮಾವಳಿ ಅನ್ವಯ ಉತ್ತಮಗುಣಮಟ್ಟದಲ್ಲಿರಬೇಕು. ತೇವಾಂಶ ಗರಿಷ್ಠಮಿತಿ ೧೨ರೊಳಗಿದ್ದು ಯೋಗ್ಯವಾಗಿರುವ ಚೀಲದಲ್ಲಿ ರಾಗಿ ತರಬೇಕು. ಇದರೊಂದಿಗೆ ಬ್ಯಾಂಕ್ ಖಾತೆ ಹಾಗೂ ನಂಬರ್ ಸಹ ನೀಡಬೇಕು. ಇಷ್ಟೆಲ್ಲಾ ಆದ ನಂತರ ಖರೀದಿ ಮಾಡಿದ ರಾಗಿಗೆ ಸರ್ಕಾರದಿಂದ ತಿಂಗಳುಗಟ್ಟಳೆ ಕಾದು ಬರುವ ಹಣ ಪಡೆಯಬೇಕು. ಅಲ್ಲದೆ ರೈತರೇನಾದರೂ ಬ್ಯಾಂಕ್ ನಲ್ಲಿ ಸಾಲಸೋಲ ಮಾಡಿದ್ದರೆ ಬರುವ ಹಣವೂ ಸಹ ಸಾಲಕ್ಕೆ ಜಮೆ ಆಗಿ ಖಾಲಿ ಕೈಯಲ್ಲಿ ವಾಪಸ್ಸಾಗಬೇಕು ಎಂಬುದೇ ರೈತರ ಚಿಂತೆಗೆ ಕಾರಣವಾಗಿದೆ.
ಇದರ ಗೋಜೆ ಬೇಡವೆನ್ನುವ ರೈತರು ವರ್ತಕರ ಬಳಿಯೇ ಇಂದಿಗೂ ಮಾರಾಟ ಮಾಡುತ್ತಿದ್ದು ಕ್ವಿಂಟಾಲ್ ಗೆ ೫೦೦ರೂ ಕಮ್ಮಿಯಾದರೂ ಪರವಾಗಿಲ್ಲ, ನಾವುತಂದ ರಾಗಿಯೆಲ್ಲಾ ತಿರಸ್ಕರಿಸದೆ ಕೊಳ್ಳುತ್ತಾರೆ.ಹಾಗಾಗಿ ವರ್ತಕರ ಬಳಿ ಮಾರುವುದೆ ಕ್ಷೇಮ ಎನ್ನುತ್ತಾರೆ ರೈತರು.
ಉತ್ತಮ ಗುಣಮಟ್ಟ: ಈ ಬಗ್ಗೆ ಖರೀದಿ ಕೇಂದ್ರದ ವ್ಯವಸ್ಥಾಪಕರನ್ನು ಮಾತನಾಡಿಸಿದಾಗ ಜಿಲ್ಲೆಯ ಇತರೆ ರಾಗಿ ಖರೀದಿ ಕೇಂದ್ರಗಳಿಗೆ ಹೋಲಿಸಿದರೆ ಹುಳಿಯಾರು ಸುತ್ತಮುತ್ತಲ ಭಾಗದ ರೈತರು ಬೆಳೆದಿರುವ ರಾಗಿ ಅಕಾಲಿಕ ಮಳೆಗೆ ಸಿಕ್ಕದೆ ಉತ್ತಮವಾಗಿದೆ. ಈ ಭಾಗದಲ್ಲಿ ಹೆಚ್ಚು ರೈತರು ಇದೀಗ ಕಣಗಳನ್ನು ಮಾಡಿಕೊಂಡು ರಾಗಿ ಒಕ್ಕಣೆ ಮಾಡುತ್ತಿದ್ದಾರೆ, ಮುಂಚಿತವಾಗಿ ಮಾಡಿದಂತಹ ಅಲ್ಪ ಸಂಖ್ಯೆಯ ರೈತರು ಮಾತ್ರ ರಾಗಿ ಮಾದರಿ ತಂದು ಹೆಸರು ನೋಂದಣಿ ಮಾಡಿಸುತ್ತಿದ್ದಾರೆ. ಬರುವ ಮಾರ್ಚ್ ವರೆಗೆ ಕೇಂದ್ರ ಖರೀದಿ ನಡೆಸುವುದರಿಂದ ರೈತರು ಕೇಂದ್ರದಲ್ಲಿಗೆ ರಾಗಿಯನ್ನು ತಂದು ಮಾರಾಟ ಮಾಡುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸುತ್ತಾರೆ.
ಕೇಂದ್ರವು ರಾಗಿ ಖರೀದಿಸಿದ ಒಂದು ವಾರದ ತರುವಾಯ ರೈತರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ನೇರ ವರ್ಗಾವಣೆಯಾಗುತ್ತದೆ ಆದರೂ ಸಹ ಕೇಂದ್ರಕ್ಕೆ ಬರುತ್ತಿರುವ ರೈತರ ಸಂಖ್ಯೆ ವಿರಳವಾಗಿದೆ ಎನ್ನುತ್ತಾರೆ.
ಒಟ್ಟಾರೆ ಮಾರುಕಟ್ಟೆದರಕ್ಕಿಂತ ೫೦೦ರೂ ಹೆಚ್ಚಿನ ದರ ನೀಡಿದ್ದರೂ ಸಹ ಖರೀದಿ ಕೇಂದ್ರದತ್ತ ಒಲವು ತೋರದ ರೈತರು ತಾವು ಬೆಳೆದ ಪದಾರ್ಥ ಹೇಗೇ ಇದ್ದರೂ ಪರವಾಗಿಲ್ಲ ಸ್ವಲ್ಪ ಬೆಲೆ ಕಡಿಮೆಮಾಡಿಕೊಂಡು ತಕ್ಷಣ ಹಣ ನೀಡುವ ವರ್ತಕರ ಬಳಿಯೇ ತೆರಳುತ್ತಿರುವುದು ವಿಪರ್ಯಾಸವೇ ಆಗಿದೆ.
----------

೪೭ ಜನ ರಾಗಿ ಮಾದರಿ ತಂದಿದ್ದು ಉತ್ತಮ ಗುಣಮಟ್ಟದಲ್ಲಿರುವ ೩೫ ಜನರ ರಾಗಿಯನ್ನು ಖರೀದಿಸಲು ಟೋಕನ್ ನೀಡಲಾಗಿದೆ. ನಾಳೆಯಿಂದ ಅವರ ಬಳಿ ಖರೀದಿ ಪ್ರಾರಂಭಿಸಲಾಗುವುದು: ಬಸವರಾಜು ಕರ್ನಾಟಕ ರಾಜ್ಯ ಆಹಾರ ಮತ್ತು ಸರಬರಾಜು ನಿಗಮ ನಿಯಮಿತದ ಅಧಿಕಾರಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.