ವಿಷಯಕ್ಕೆ ಹೋಗಿ

ಹುಳಿಯಾರು: ಅಂಗಡಿದಾರರ ಹಾಗೂ ನಿವಾಸಿಗಳಲ್ಲಿ ಹೆಚ್ಚಿದ ದುಗುಡ : ಮಂಗಳವಾರದಿಂದ ಕೆರೆ ಅಂಗಳದಲ್ಲಿನ ಮನೆ,ಅಂಗಡಿ ಸರ್ವೆಕಾರ್ಯ ಶುರು

ಈಗಾಗಲೇ ಹುಳಿಯಾರು ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದ್ದು ತೆರವು ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, ಕೇಶವಾಪುರ,ವಳಗೆರೆಹಳ್ಳಿ ಭಾಗದಲ್ಲಿ ತೆರವು ಮುಗಿಯುವ ಹಂತದಲ್ಲಿದ್ದು , ಮಂಗಳವಾರದಿಂದ ಶಂಕರಪುರ ಭಾಗದಲ್ಲಿರುವ ಕೆರೆಅಂಗಳದಲ್ಲಿರುವ ಮನೆಗಳು ಹಾಗೂ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಸರ್ವೆಕಾರ್ಯ ನಡೆಯಲಿದೆ.
ಹುಳಿಯಾರು ಬಸ್ ನಿಲ್ದಾಣದಲ್ಲಿ ಕೆರೆ ಒತ್ತುವರಿ ಜಾಗದಲ್ಲಿರುವ ಅಂಗಡಿಗಳು.
ಕಳೆದ ಎರಡು ತಿಂಗಳಿನಿಂದಲೂ ಕೆರೆ ಒತ್ತುವರಿ ಮಾಡಿ ಕಟ್ಟಿರುವ ಮನೆ ಹಾಗೂ ಅಂಗಡಿಗಳ ತೆರವಿನ ಬಗ್ಗೆ ದಿನಕ್ಕೊಂದು ವದಂತಿಗಳು ಕೇಳಿಬಂದು ಇದೀಗ ಅಂತಿಮ ತೆರೆ ಬೀಳುವ ಲಕ್ಷಣ ಕಂಡುಬರುತ್ತಿದ್ದು ಅಂಗಡಿದಾರರ ಹಾಗೂ ನಿವಾಸಿಗಳ ದುಗುಡ ಹೆಚ್ಚಾಗುವಂತೆ ಮಾಡಿದೆ.
ಹುಳಿಯಾರು ಸರ್ವೆ ನಂ.೧ರಲ್ಲಿ ಹುಳಿಯಾರು ಅಮಾನಿಕೆರೆ ಎಂದು ೪೮೦ ಎಕರೆ ೩೮ ಗುಂಟೆ ಕೆರೆ ಜಾಗ ಗುರ್ತಿಸಲಾಗಿದೆ. ಸಾಕಷ್ಟು ವಿಸ್ತೀರ್ಣವಾಗಿರುವ ಈ ಕೆರೆ ತುಂಬಿ ಹಲವು ದಶಕಗಳೇ ಕಳೆದಿದ್ದು, ನೀರಿನ ಹರಿವು ಇಲ್ಲದಂತಾಗಿ ಒತ್ತುವರಿಗೆ ಆಸ್ಪದವಾಗಿತ್ತು. ಕೇಶವಾಪುರ, ವಳಗೆರೆಹಳ್ಳಿ,ಶಂಕರಪುರ ಹಾಗೂ ಬಸ್ ನಿಲ್ದಾಣದ ಸೇರಿದಂತೆ ಒಟ್ಟು 45 ಎಕರೆ ಪ್ರದೇಶದಷ್ಟು ಜಾಗ ಒತುವರಿಯಾಗಿದ್ದು, ಜಮೀನು , ಇಟ್ಟಿಗೆ ಫ್ಯಾಕ್ಟರಿ,ಮನೆ ಹಾಗೂ ಅಂಗಡಿಗಳಿಗೆ ಬಳಕೆಯಾಗಿದೆ. ಈ ಹಿಂದೆ ನಡೆಸಿದ ಸಮೀಕ್ಷೆಯಂತೆ ಅಂಗಡಿ ಹಾಗೂ ಮನೆ ಸೇರಿ 199 ಮಂದಿಯ ಪಟ್ಟಿ ಮಾಡಲಾಗಿದೆ. ಸದ್ಯ ಸರ್ವೆ ಮಾಡುತ್ತಲೇ ಒತ್ತುವರಿಯನ್ನು ತೆರವು ಮಾಡುತ್ತಾ ಸಾಗುತ್ತಿದ್ದು, ಮೊದಲು ಕೆರೆ ಸುತ್ತಲಲ್ಲಿ ಒತ್ತುವರಿಯಾಗಿರುವ ತೋಟ,ಹೊಲಗಳನ್ನು ತೆರವು ಮಾಡಿ ಟ್ರಂಚ್ ಹೊಡೆದು ಗಡಿ ಗುರ್ತಿಸಲಾಗುತ್ತಿದೆ.
ಸಮಸ್ಯೆ ಏನು: ಬಸ್ ನಿಲ್ದಾಣ ಹಾಗೂ ಶಂಕರಪುರ ಬಡಾವಣೆಯಲ್ಲಿ ಅನೇಕ ವರ್ಷಗಳಿಂದ ಮನೆ ಹಾಗೂ ಅಂಗಡಿಗಳು ನಿರ್ಮಾಣ ಮಾಡಿಕೊಂಡಿದ್ದು ಇದೀಗ ಅದಕ್ಕೆ ಸಂಚಕಾರ ಬರಲಿದೆ ಎಂಬುದು ಆತಂಕದ ವಿಚಾರವಾಗಿದೆ. ಕಳೆದ ಸುಮಾರು ವರ್ಷಗಳಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಪೆಟ್ಟಿಗೆ ಅಂಗಡಿಗಳನ್ನು ಹಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಅನೇಕರಿಗೆ ಈ ಅಂಗಡಿಗಳೆ ಜೀವನಾಧಾರವಾಗಿವೆ. ಈಗ ಅಂಗಡಿಗಳು ತೆರವಾದರೆ ಇವರೆಲ್ಲಾ ಬೀದಿಗೆ ಬರಬೇಕಾಗುತ್ತದೆ.
ಅಂತೆಯೇ ಶಂಕರಪುರ ಬಡಾವಣೆಯಲ್ಲಿರುವ ಅನೇಕ ಮನೆಗಳು ಸಹ ಕೆರೆ ಅಂಗಳದಲ್ಲಿದ್ದು ಈಗಾಗಲೇ ಪಂಚಾಯ್ತಿಯಿಂದ ರಸ್ತೆ,ಕುಡಿಯುವ ನೀರಿನ ಸೌಲಭ್ಯ,ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆದಿದ್ದಾರಲ್ಲದೆ, ಮತಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿತರಾಗಿ ಗುರುತಿನ ಕಾರ್ಡ್ ಹಾಗೂ ಪಡಿತರ ಕಾರ್ಡ್ ಗಳನ್ನು ಸಹ ಹೊಂದಿದ್ದಾರೆ. ಇಲ್ಲಿನ ಅನೇಕ ಮನೆಗಳೀಗೆ ಪಂಚಾಯ್ತಿಯಿಂದ ಮ್ಯುಟೇಷನ್ ಸಹ ನೀಡಿ ಕಂದಾಯ ಕಟ್ಟಿಸಿಕೊಂಡಿದ್ದಾರೆ. ಇಲ್ಲಿರುವವರಲ್ಲಿ ಬಹುಪಾಲು ಮಂದಿ ಕಡುಬಡವರಾಗಿದ್ದು ಇವರಿಗೆ ಈಗಿರುವ ಜಾಗ ಬಿಟ್ಟರೆ ಬೇರೆಲ್ಲೂ ತುಂಡು ಜಾಗವೂ ಸಹ ಇಲ್ಲ. ನಿತ್ಯ ಕೂಲಿ ಮಾಡಿ ಬಂದ ಅಲ್ಪಸ್ವಲ್ಪ ಹಣದಿಂದ ನಿತ್ಯ ತುತ್ತಿನ ಚೀಲ ತುಂಬಿಸಿಕೊಂಡು ಜೀವನಬಂಡಿ ನಡೆಸುತ್ತಿದ್ದಾರೆ. ಇಂತಹದರ ನಡುವೆ ಅಂಗಡಿ ಹಾಗೂ ಮನೆಗಳು ತೆರವಾಗುತ್ತವೆಯೋ ಇಲ್ಲವೋ ಎಂಬ ಮಾತುಗಳು ಕೇಳಿಬರುತ್ತಿವೆ.
ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಜಿಲ್ಲಾಧಿಕಾರಿಗಳ ಆದೇಶದನ್ವಯ ಕೆರೆಗಳ ಒತ್ತುವರಿ ತೆರವು ಕಡ್ಡಾಯವಾಗಿದ್ದು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎನ್ನಲಾಗುತ್ತಿದೆ.ತೆರವು ಕಾರ್ಯಾಚರಣೆ ವೇಳೆ ಯಾರಾದರೂ ಅಡ್ಡಿಪಡಿಸಿದರೆ ಅಥವಾ ತಕರಾರು ತೆಗೆದರೆ ಅವರ ಮೇಲೆ ಕಾನೂನುರೀತ್ಯಾ ಕ್ರಮ ಕೈಗೊಳ್ಳುವುದಾಗಿದ್ದು, ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಕಾರ್ಯ ನಡೆಯುವ ಸಾಧ್ಯತೆಯಿದ್ದು,ತೆರವಾದರೆ ಮುಂದೆ ಗತಿಯೇನು ನಾವೆಲ್ಲಿಗೆ ಹೋಗೋದು ಸರ್ಕಾರದಿಂದ ಪುನರ್ವಸತಿ ಕಲ್ಪಿಸುತ್ತಾರೆಯೇ ಇಲ್ಲವೋ ಎಂಬ ಯಕ್ಷಪ್ರಶ್ನೆಗಳು ಮೂಡಿವೆ.
ಆತಂಕ ಬೇಡ: ಶಂಕರಪುರ ಬಡಾವಣೆಯಲ್ಲಿರುವ ವಸತಿದಾರರಿಗೆ ಕೆರೆಸೂರಗೊಂಡನಹಳ್ಳಿ ಸರ್ವೆ ನಂ.೩೨ ರಲ್ಲಿ ನೀವೇಶನ ಗುರ್ತಿಸಲಾಗಿದ್ದು ಜಮೀನು ವಿಚಾರವಾಗಿ ಕೆಲವರು ಕಾನೂನು ಮೊರೆ ಹೋಗಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಡವಾಗುತ್ತಿದೆ. ಸಮಸ್ಯೆ ಬಗೆಹರಿದ ಕೂಡಲೇ ನೀವೇಶನ ಹಂಚಿಕೆ ಮಾಡಿ ಆನಂತರವಷ್ಟೇ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ್ ಸ್ಪಷ್ಠ ಪಡಿಸಿದ್ದು ಸದ್ಯ ಅಂಗಡಿ ತೆರವುಕಾರ್ಯ ತಹಸೀಲ್ದಾರ್ ಅವರ ಸಮಕ್ಷಮ ನಡೆಯುವುದು ಖಚಿತ ಎಂದಿದ್ದಾರೆ.
ಅಪಸ್ವರ : ಬಸ್ ನಿಲ್ದಾಣದ ಅಂಗಡಿಗಳ ತೆರವು ಸದ್ಯಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿದ್ದು, ಹುಳಿಯಾರು ಅಮಾನಿಕೆರೆಯ ಸಂಪೂರ್ಣ ಒತ್ತುವರಿ ತೆರವು ಮಾಡಲೇಬೇಕು, ಒತ್ತಡಕ್ಕೆ ಮಣಿದು ತೆರವು ಮುಂದೂಡಿದಲ್ಲಿ ಪ್ರತಿಭಟಿಸುವುದಾಗಿ ಈಗಾಗಲೇ ಕಾರ್ಯಾಚರಣೆಯಲ್ಲಿ ತೋಟತುಡಿಕೆ ಕಳೆದುಕೊಂಡವರು ಎಚ್ಚರಿಸಿದ್ದಾರೆ
----------

ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿರುವ ಅಂಗಡಿಗಳಿಂದಲೇ ನಮ್ಮ ಜೀವನ ಸಾಗುತ್ತಿದೆ,ಈಗ ಅವನ್ನು ತೆರವುಗೊಳಿಸಿದರೆ ನಮ್ಮಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಮುಂದೆ ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ನಡೆಯಲಿದ್ದು ಹೆಚ್ಚುವರಿ ಜಾಗದ ಅವಶ್ಯಕವಿದ್ದರೆ ಆಗ ತೆರವುಗೊಳಿಸಲಿ : ಕೋಳಿಅಂಗಡಿ ಶ್ರೀನಿವಾಸ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...