ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಪುರದಮಠದಲ್ಲಿ ಶನಿವಾರ ನಡೆದ ಶ್ರೀಚನ್ನಸವೇಶ್ವರಸ್ವಾಮಿಯ ಕಡೇಕಾರ್ತೀಕ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ರಾಗಿಮುದ್ದೆ ಸಾರಿನ ಸವಿ ಸವಿದರು
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಪುರದಮಠದಲ್ಲಿ ಚನ್ನಸವೇಶ್ವರಸ್ವಾಮಿಯ ಕಡೇಕಾರ್ತೀಕದ ಅಂಗವಾಗಿ ಸ್ವಾಮಿಯ ಉತ್ಸವ ನಡೆಸಲಾಯಿತು. |
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಪುರದಮಠದಲ್ಲಿ ಚನ್ನಬಸವೇಶ್ವರಸ್ವಾಮಿ ಕಡೇಕಾರ್ತೀಕದಲ್ಲಿ ಭಕ್ತರಿಗಾಗಿ ರಾಗಿಮುದ್ದೆ ಕಟ್ಟುತ್ತಿರುವ ಮಹಿಳೆಯರು. |
ಕಾರ್ತೀಕದ ಅಂಗವಾಗಿ ಕೆಂಕೆರೆ ಗ್ರಾಮದಿಂದ ಚನ್ನಬಸವೇಶ್ವರ ಸ್ವಾಮಿಯ ಹಾಗೂ ಗ್ರಾಮದೇವತೆ ಕಾಳಿಕಾಂಭ ದೇವಿಯನ್ನು ಅಲಂಕರಿಸಿ ಸಕಲ ವಾದ್ಯದೊಂದಿಗೆ ಹೊರಡಿಸಿದರು. ನಂತರ ಧ್ವಜಕುಣಿತದೊಂದಿಗೆ ಊರಿನ ಬೀದಿಯಲ್ಲಿ ಸಾಗುತ್ತಾ ಸುಮಾರು ೩ ಕೀ.ಮೀ ದೂರದ ಸ್ವಾಮಿಯ ಮೂಲಸ್ಥಾನ ಪುರದಮಠಕ್ಕೆ ಕಾಲ್ನಡಿಗೆಯಲ್ಲಿ ಗ್ರಾಮದವರೆಲ್ಲಾ ಸೇರಿ ಕರೆದೊಯ್ದರು. ಅಲ್ಲಿ ಮೂಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಸವನನ್ನು ವಿವಿಧ ಹೂಗಳಿಂದ ಅಲಂಕರಿಸಿ ಉತ್ಸವ ನಡೆಸಿದರಲ್ಲದೆ, ಭಕ್ತರು ಧ್ವಜಕುಣಿಯುವ ಮೂಲಕ ಉತ್ಸವಕ್ಕೆ ರಂಗು ತಂದಿದ್ದರು.
ರಾಗಿ ಮುದ್ದೆ ವಿಶೇಷ: ಪುರದಮಠದಲ್ಲಿ ನಡೆಯುವ ಪುರಾಣಪ್ರಸಿದ್ದ ಚನ್ನಸವಣ್ಣನ ಕಡೇ ಕಾರ್ತೀಕದಲ್ಲಿ ರಾಗಿ ಮುದ್ದೆ ಸಾರಿನ ಊಟ ವಿಶೇಷವಾಗಿದ್ದು ಇಲ್ಲಿಗೆ ಜಿಲ್ಲೆಯ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ . ಅಲ್ಲದೆ ಪುರದಮಠ ಜಿಲ್ಲೆಯ ಗಡಿಭಾಗವಾಗಿರುವುದರಿಂದ ಹೊಸದುರ್ಗ, ಹಿರಿಯೂರು ತಾಲ್ಲೂಕುಗಳ ಅಪಾರ ಸಂಖ್ಯೆಯ ಭಕ್ತರು ಸಹ ಆಗಮಿಸಿ ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ರಾಗಿಮುದ್ದೆ ಸವಿಯುತ್ತಾರೆ. ಈರೀತಿ ಮುದ್ದೆ ಊಟ ತಯಾರಿಸುವುದು ಕಳೆದ ಅನೇಕ ವರ್ಷದಿಂದ ನಡೆದುಕೊಂಡು ಬಂದಿದ್ದು ಭಕ್ತರು ತಾವು ಬೆಳೆದ ದವಸ ಧಾನ್ಯ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಮೀಸಲಾಗಿ ಹಾಕಿರುತ್ತಾರೆ. ಅಲ್ಲದೆ ಕೆಲವರು ಅಕ್ಕಿ, ಬೇಳೆಕಾಳು ಸೇರಿದಂತೆ ಸಾರು ತಯಾರಿಸಲು ಬೇಕಾದ ವಸ್ತುಗಳನ್ನು ಕೊಡಿಸಿರುತ್ತಾರೆ. ಇದನ್ನೆಲ್ಲಾ ಉಪಯೋಗಿಸಿ ಗ್ರಾಮದ ಜನರೇಲ್ಲಾ ಸೇರಿ ರಾಗಿಮುದ್ದೆ ಹಾಗೂ ಹುಳ್ಸೊಪ್ಪಿನ ಸಾರು ತಯಾರಿಸಿರುತ್ತಾರೆ. ಇದನ್ನೇ ಸ್ವಾಮಿಗೆ ನೈವೇದ್ಯವಾಗಿಟ್ಟು ನಂತರ ಭಕ್ತರಿಗೆ ಬಡಿಸುತ್ತಾರೆ. ಅಲ್ಲದೆ ಇಲ್ಲಿ ತಯಾರಿಸುವ ಸಾಂಬಾರನ್ನು ಭಕ್ತರು ತಮ್ಮ ಮನೆಗಳಿಗೆ ಕೊಂಡೈಯುವುದು ವಿಶೇಷ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ