ಹುಳಿಯಾರು ಪಟ್ಟಣದ ವಿವಿಧ ದೇವಾಲಯಗಳಲ್ಲಿ ಹಾಗೂ ಸುತ್ತಮುತ್ತಲ ಸೀಗೆಬಾಗಿ,ಹೊಸಹಳ್ಳಿ, ಕೆಂಕೆರೆ, ತಿರುಮಲಾಪುರ,ದಸೂಡಿ,ನಂದಿಹಳ್ಳಿ ಗ್ರಾಮಗಳ ದೇವಾಲಯಗಳಲ್ಲಿ ಶನಿವಾರ ರಾಮನವಮಿಯ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿ ಪಾನಕ,ಮಜ್ಜಿಗೆ ವಿತರಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹುಳಿಯಾರಿನಲ್ಲಿ ರಾಮನವಮಿ ಅಂಗವಾಗಿ ಲಿಂಗಪ್ಪನಪಾಳ್ಯದ ಶ್ರೀರಾಮದೇವರನ್ನು ಗ್ರಾಮದೇವತೆಗಳಾದ ದುರ್ಗಮ್ಮ, ಹುಳಿಯಾರಮ್ಮನವರೊಂದಿಗೆ ಮೆರವಣೆಯಲ್ಲಿ ಆಂಜನೇಯಸ್ವಾಮಿ ದೇವಾಲಯಕ್ಕೆ ಕರೆದೊಯ್ಯಲಾಯಿತು. |
ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಮುಂಜಾನೆ ಪೂಜೆ, ಹೋಮ ಹಾಗೂ ಮಹಾಮಂಗಳಾರತಿ ನಡೆಸಲಾಯಿತು. ಆಂಜನೇಯಸ್ವಾಮಿಗೆ ಭಕ್ತರೊಬ್ಬರು ಬೆಳ್ಳಿಯ ವಜ್ರಾಂಗಿ ಸಮರ್ಪಿಸಿದ ಹಿನ್ನಲೆಯಲ್ಲಿ ಅರ್ಚಕ ಶ್ರೀಧರ್ ಅವರಿಂದ ಹೋಮಹವನಾದಿಗಳು ನಡೆಯಿತು. ಇದೇ ಸಂದರ್ಭದಲ್ಲಿ ಬೆಲುಗೂರಿನ ಬಿಂಧುಮಾಧವ ಸ್ವಾಮಿಯವರು ದೇವಾಲಯಕ್ಕೆ ಆಗಮಿಸಿ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದರು. ರಾಮಭಜನೆ ನಂತರ ದೇವಾಲಯ ಸಮಿತಿ ಹಾಗೂ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತಾಧಿಗಳಿಗೆ ಪಾನಕ,ಮಜ್ಜಿಗೆ,ಕಡಲೆಕಾಳು ಉಸ್ಲಿ ವಿತರಿಸಲಾಯಿತು.
ಹುಳಿಯಾರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ನ ಯುವಕರು ಪಾನಕ,ಮಜ್ಜಿಗೆ ವಿತರಿಸಿದರು. |
ಪಟ್ಟಣದ ಸೀತಾರಾಮ ಕಲ್ಯಾಣಮಂದಿರದಲ್ಲಿ ವಿಪ್ರಸಂಘದಿಂದ ಶ್ರಿರಾಮಮೂರ್ತಿಗೆ ಪೂಜೆ ಸಲ್ಲಿಸಿ,ಮಹಿಳ ಸಂಘದಿಂದ ಭಜನೆ ಮಾಡಿ,ಗೊಜ್ಜವಲಕ್ಕಿ, ಪಾನಕ,ಮಜ್ಜಿಗೆ ವಿತರಿಸಲಾಯಿತು. ವಾಸವಿ ದೇವಾಲಯದಲ್ಲಿ ಆರ್ಯವೈಶ್ಯ ಮಂಡಳಿಯವರಿಂದ, ಅನಂತಶಯನ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವಾಲಯ ಸಮಿತಿಯವರಿಂದ ರಾಮನವಮಿ ಆಚರಿಸಿ ಪಾನಕ,ಕೋಸಂಬರಿ ವಿತರಿಸಲಾಯಿತು.
ರಾಮನವಮಿಯನ್ನು ಊರಹಬ್ಬವಾಗಿ ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಲಿಂಗಪ್ಪನಪಾಳ್ಯದಿಂದ ಪ್ರತೀತಿಯಂತೆ ಈ ವರ್ಷವೂ ಸಹ ಶ್ರೀರಾಮದೇವರ ಉತ್ಸವ ಮೂರ್ತಿಯನ್ನು ಹುಳಿಯಾರಿನ ಗ್ರಾಮದೇವತೆಗಳಾದ ದುರ್ಗಮ್ಮ,ಹುಳಿಯಾರಮ್ಮನವರೊಂದಿಗೆ ಬಸವನ ನಗಾರಿ ಸಮೇತ ಸಕಲವಾದ್ಯದೊಂದಿಗೆ ರಂಗನಾಥಸ್ವಾಮಿ ಭಜನಾ ತಂಡದವರ ರಾಮಭಜನಾ ಗಾಯನದೊಂದಿಗೆ ಆಂಜನೇಯಸ್ವಾಮಿ ದೇವಾಲಯಕ್ಕೆ ಕರೆತರಲಾಯಿತು. ನಂತರ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಪಾನಕ ವಿತರಿಸಲಾಯಿತು. ನಂತರ ಸ್ವಾಮಿಯವರನ್ನು ಮೆರವಣೆಯಲ್ಲಿ ಶನೇಶ್ವಸ್ವಾಮಿ,ರಂಗನಾಥಸ್ವಾಮಿ ದೇವಾಲಯಗಳಿಗೆ ಕರೆದೊಯ್ದು ಅಲ್ಲಿಯೂ ಸಹ ಪೂಜೆ ಸಲ್ಲಿಸಿ ಪಾನಕಪನಿವಾರ ವಿತರಣೆ ನಡೆಸಲಾಯಿತು. ನಂತರ ಉರಿ ಬಿಸಿಲನ್ನು ಲೆಕ್ಕಿಸದೆ ದೇವರುಗಳನ್ನು ಲಿಂಗಪ್ಪನಪಾಳ್ಯಕ್ಕೆ ವಾಪಸ್ಸು ಕರೆದೊಯ್ಯಲಾಯಿತು. ಈ ವೇಳೆ ಪಾಳ್ಯದ ದುರ್ಗಪ್ಪ, ಬೀರಪ್ಪ,ನಾಗರಾಜು, ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ನ ಅಶೋಕ್ ಬಾಬು, ಮೆಡಿಕಲ್ ಚನ್ನಬಸವಯ್ಯ, ದಯಾನಂದ್, ರಾಜು, ಮಂಜುನಾಥ್, ಸತೀಶ್, ಬಡಗಿ ರಾಮಣ್ಣ,ಲೋಕೇಶ್, ಮನು, ಎಸ್.ಬಿ.ಎಂ ಗ್ರೋಪ್ಸ್ ನ ಸದಸ್ಯರು ಸೇರಿದಂತೆ ಇತರರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ