ವಿಷಯಕ್ಕೆ ಹೋಗಿ

ಕಾರೇಹಳ್ಳಿ ಜಾತ್ರೆಯಲ್ಲಿ ರಾಸುಗಳ ಸಿಂಗಾರದ ಪರಿಕರಗಳ ಸದ್ದು

ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು : ಎಲ್ಲೆಡೆ ಸುಗ್ಗಿಯ ಕೆಲಸ ಮುಗಿದಿದ್ದು ಸುಡು ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗಳಿಂದ ಬಿಡುವು ಸಿಕ್ಕಿದ್ದು ಇನ್ನೇನಿದ್ದರೂ ಜಾತ್ರೆಗಳ ಸುಗ್ಗಿಯಾಗಿದೆ. ಜಾತ್ರೆಗಳು ಗ್ರಾಮೀಣ ಪ್ರದೇಶಗಳಲ್ಲಿ ಒಂದು ರೀತಿಯ ಪರಂಪರೆಯಾಗಿದ್ದು ಆಯಾ ಭಾಗದ ಆರಾಧ್ಯ ದೇವತೆಗಳನ್ನು ಹೊತ್ತು ಸಂಭ್ರಮಿಸುವ ಹಾಗೂ ಇದರ ನೆಪದಲ್ಲೇ ನೆಂಟರಿಷ್ಟರೆಲ್ಲಾ ಸೇರುವ ಆಚರಣೆಯಾಗಿದೆ.
ಕಾರೇಹಳ್ಳಿ ಜಾತ್ರೆಯಲ್ಲಿ ರಾಸುಗಳ ಸಿಂಗಾರದ ಪರಿಕರಗಳನ್ನು ಕೊಳ್ಳುತ್ತಿರುವ ರೈತರು
ಹೆಚ್ಚಿನ ಜಾತ್ರೆಗಳು ಅಯಾ ಭಾಗದ ಗ್ರಾಮದೇವತೆಗಳ ಆರಾಧನೆಗೆ ಸೀಮಿತವಾದರೆ ಮತ್ತೆ ಕೆಲವು ಜಾನುವಾರುಗಳ ಜಾತ್ರೆಯಾಗಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ರಾಸುಗಳ ವಿನಿಮಯಕ್ಕೆ ನೆರವಾಗಲಿವೆ. ಈ ಸಮಯದಲ್ಲಿ ಜಾನುವಾರು ಜಾತ್ರೆಗಳು ಎಲ್ಲೆ ನಡೆದರೂ ಸಹ ಗ್ರಾಮೀಣ ರೈತರು ತಪ್ಪದೇ ಹೋಗಿಬರುತ್ತಾರೆ. ಈ ಭಾಗದಲ್ಲಿ ಕಾರೇಹಳ್ಳಿ ಜಾತ್ರೆ ದನಗಳ ಮಾರಾಟಕ್ಕೆ ಹೆಸರುವಾಸಿಯಾಗಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನಕ್ಕಿಂತ ರಾಸುಗಳೇ ಹೆಚ್ಚಾಗಿ ಕಂಡುಬರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ರಾಸುಗಳು ಆಗಮಿಸಿದ್ದು ಇನ್ನೂ ಹತ್ತು ದಿನಗಳಕಾಲ ರಾಸುಗಳ ಕೊಡುಕೊಳ್ಳುವಿಕೆ ನಡೆಯಲಿದೆ.ಇದರ ಜೊತೆಯಲ್ಲಿ ರಾಸುಗಳಿಗೆ ಸಂಬಂಧಿಸಿದ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾದ ಅಂಗಡಿಗಳು ಹೆಚ್ಚುಕಂಡುಬರುತ್ತಿದೆ.
ಸಾಮಾನ್ಯವಾಗಿ ಜಾತ್ರೆಗಳಲ್ಲಿ ಪುರಿ,ಬೆಂಡು,ಬತಾಸು, ಮಕ್ಕಳ ಆಟಿಕೆ,ಮಹಿಳೆಯರ ಸಿಂಗಾರದ ವಸ್ತುಗಳನ್ನೊಳಗೊಂಡ ಅಂಗಡಿಗಳೇ ಹೆಚ್ಚಾಗಿ ಕಂಡುಬಂದರೆ, ಇದಕ್ಕೆ ಸೆಡ್ಡುಹೊಡೆದಂತೆ ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿ ಜಾತ್ರೆಯಲ್ಲಿ ಮಾತ್ರ ರಾಸುಗಳ ಸಿಂಗಾರಕ್ಕೆ ಬೇಕಾದ ಸಕಲ ಪರಿಕರಗಳ ಅಂಗಡಿಗಳು ಹೆಚ್ಚಾಗಿ ಕಂಡುಬರುವುದು ವಿಶೇಷವಾಗಿದೆ.
ದೂರದ ಗದಗ್,ದಾವಣಗೆರೆ ಮುಂತಾದ ಕಡೆಯಿಂದ ಇದಕ್ಕೆ ಬೇಕಾದ ಪರಿಕರಗಳನ್ನು ತರುವ ವ್ಯಾಪಾರಿಗಳು ಇಂತಹ ಹತ್ತಾರು ಅಂಗಡಿಗಳನ್ನು ತೆರೆದಿದ್ದಾರೆ. ಎತ್ತುಗಳು ತಮ್ಮ ಜೀವನಾಡಿ ಎಂದು ಬಗೆದಿರುವ ರೈತರು ತಮ್ಮ ರಾಸುಗಳನ್ನು ಕಣ್ ಕುಕ್ಕುವಂತೆ ಅಲಂಕರಿಸಲು ಹಿಂದೆಗೆಯುವುದಿಲ್ಲ. ಹಾಗಾಗಿ ಇಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚು.
ಈ ಅಂಗಡಿಗಳಲ್ಲಿ ಎತ್ತು , ಹಸುಗಳಿಗೆ ಹಾಕುವ ಮೂಗುದಾರ, ಮುಕೋಡ, ಬಾಯಿಕುಕ್ಕೆ, ಕೊರಳು ಹಾಗೂ ಕಾಲಿಗೆ ಕಟ್ಟುವು ಹಿತ್ತಾಳೆಯ ಗಂಟೆ, ಕೊರಳಿಗೆ ಹಾಕುವ ಕೊರಳ ಹಗ್ಗ, ಶಂಕು, ಗಂಟೆ ಸಹಿತಹಗ್ಗ, ಗೆಜ್ಜೆಸಹಿತ ಹಣೆಪಟ್ಟಿ,ಗಗ್ಗರ, ದೃಷ್ಠಿಯಾಗದಂತೆ ಕಟ್ಟುವ ಕುರಿ ಉಣ್ಣೆಯಿಂದ ಮಾಡಿದ ಕರಿಹಗ್ಗ, ಕುಚ್ಚು, ಕೊಂಬುಗಳ ತುದಿಗೆ ಹಾಕುವ ಕೋಡುಅಣ್ಸು ಸೇರಿದಂತೆ ಇನ್ನಿತರ ವಸ್ತುಗಳು ಕಂಡುಬರುವುದಲ್ಲದೆ, ರೈತರ ಕೃಷಿ ಚಟುವಟಿಕೆಯಲ್ಲಿ ಬಳಸುವ ದೊಡ್ಡ ಹಗ್ಗಗಳು, ನೇಗಿಲು ಹೂಡುವಹಗ್ಗ, ಅಗಡುಗಣ್ಣಿ, ತರಹೇವಾರಿ ಬಾರಿಕೋಲುಗಳು ಸಹ ದೊರೆಯುತ್ತವೆ.
 ದನಕರುಗಳಿಗೆ ಕಟ್ಟ ಕುಚ್ಚು , ಗಂಟೆ, ಶಂಖ ತರಹೇವಾರಿ ಇಲ್ಲಿ ಸಿಗುತ್ತೆ, ಅಲ್ಲದೆ ದನಕಟ್ಟಲು, ನೇಗಿಲು , ನೊಗ ಕಟ್ಟಲು ಬೇಕಾದ ಹಗ್ಗ ಸೇರಿದಂತೆ ಇನ್ನಿತರ ವಸ್ತುಗಳು ಈ ಜಾತ್ರೆಯಲ್ಲಿ ಒಂದೆಡೆ ಸಿಗುತ್ತೆ. ಈಗ ಬಿಟ್ಟರೆ ಮುಂದಿನ ವರ್ಷದ ಜಾತ್ರೆವರೆಗೆ ಕಾಯಬೇಕಾಗುತ್ತೆ : ಪರ್ವತಯ್ಯ , ಕೆಂಕೆರೆಗೊಲ್ಲರಹಟ್ಟಿ ರೈತ, 
ಜಾತ್ರೆಯ ನಂತರದ ದಿನಗಳಲ್ಲಿ ರಾಸುಗಳ ಸಿಂಗಾರದ ವಸ್ತುಗಳು ಹಾಗೂ ಕೃಷಿಗೆ ಬಳಸುವ ವಸ್ತುಗಳಿಗಾಗಿ ರೈತರು ಇಂತಹ ಅಂಗಡಿಗಳನ್ನು ಹುಡುಕುತ್ತಾದರೋ ಸಹ ಸಕಲವಸ್ತುಗಳು ದೊರೆಯದೆ ಹತಾಶರಾಗುತ್ತಾರೆ. ಆದರೆ ಈ ಜಾತ್ರೆಯಲ್ಲಿ ಮಾತ್ರ ದನಗಳ ಅಲಂಕಾರಕ್ಕೆ ಸಮರ್ಪಕವಾಗಿ ಬೇಕಾದ ರೈತರ ಮನಸ್ಸಿಗೆ ಒಪ್ಪುವಂತ ವಸ್ತುಗಳು ಸಿಗುತ್ತವೆ.
ರಾಸುಗಳ ಅಲಂಕಾರಿಕ ವಸ್ತುಗಳನ್ನೊಳಗೊಂಡ ಅಂಗಡಿದಾರರು ಕೆಲ ವಸ್ತುಗಳನ್ನು ತಾವೇ ಸಿದ್ದಮಾಡಿದರೆ, ಮತ್ತೆ ಕೆಲ ವಸ್ತುಗಳನ್ನು ನಗರ ಪ್ರದೇಶಗಳಿಂದ ತಂದು ಮಾರಾಟ ಮಾಡುತ್ತಾರೆ. ಅಲ್ಲದೆ ಕೆಲ ಅಂಗಡಿಯವರು ಈ ವಸ್ತುಗಳ ತಯಾರಿಕೆಯನ್ನು ತಮ್ಮ ಕಸುಬಾಗಿಸಿಕೊಂಡಿರುವುದಲ್ಲದೆ , ನೈಪುಣ್ಯತೆಯಿಂದ ಹೊಸಹೊಸ ವಿನ್ಯಾಸದ ಪರಿಕರಗಳನ್ನು ಸಿದ್ದಗೊಳಿಸಿ ಮಾರಾಟ ಮಾಡುತ್ತಾರೆ. ಈ ಅಂಗಡಿಗಳಿಂದಲೇ ತಮ್ಮ ಜೀವನ ಸಾಗಿಸುತ್ತಿರುವ ಇವರು ದನಗಳ ಜಾತ್ರೆ ಎಲ್ಲಿ ನಡೆದರು ಅಲ್ಲಿ ಹಾಜರಿರುತ್ತಾರೆ.
ಕಾರೇಹಳ್ಳಿ ಜಾತ್ರೆಗೆ ಹೋದರೆ ಸಾಕು ತಮ್ಮ ರಾಸುಗಳಿಗೆ ಬೇಕಾದ ಹಾಗೂ ಕೃಷಿ ಚಟುವಟಿಕೆಗೆ ಅವಶ್ಯಕ ವಸ್ತುಗಳು ಸಿಕ್ಕೆ ಸಿಗುತ್ತದೆ ಎಂಬ ನಂಬಿಕೆ ಈ ಭಾಗದ ರೈತರದ್ದಾಗಿದ್ದು, ಈವೇಳೆ ಬಿಟ್ಟರೆ ನಂತರ ಪರದಾಡಬೇಕಾಗುತ್ತದೆ ಎಂಬ ದೃಷ್ಠಿಯಿಂದ ಕೆಲ ರೈತರು ಜಾತ್ರೆಯಲ್ಲಿನ ಅಂಗಡಿಗಳಲ್ಲಿ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿರುತ್ತಾರೆ.

ಒಟ್ಟಾರೆ ಇನ್ನಿತರ ಊರುಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಸೇರುವ ಅಂಗಡಿಗಳಿಗಿಂತ ಕಾರೇಹಳ್ಳಿಯಲ್ಲಿ ನಡೆಯುವ ಜಾತ್ರೆಯಲ್ಲಿ ಸೇರುವ ರಾಸುಗಳ ಅಲಂಕಾರಿಕ ವಸ್ತುಗಳ ಅಂಗಡಿಗಳು ಹೆಚ್ಚಾಗಿದ್ದು ಈ ಜಾತ್ರೆಯ ವಿಶೇಷವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.