ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯ ಗೋಷ್ಠಿ ಪಾಕ್ಷಿಕ ಕಾರ್ಯಕ್ರಮ ಪಟ್ಟಣದ ವಸಂತನಗರ ಬಡಾವಣೆಯ ನಾಗೇಂದ್ರಪ್ಪ ಅವರ ನಿವಾಸದಲ್ಲಿ ನಡೆಯಿತು.
ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಬರಹಗಾರ ಶಶಿಭೂಷಣ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಹಳಗನ್ನಡ ಸಾಹಿತ್ಯ ಬಗೆಗಿನ ವಿಚಾರಗಳನ್ನು ತಿಳಿಸಿದರು. ಶ್ರೀರಾಂಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ್ ಅವರು ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಬದುಕು, ಬರಹ ಹಾಗೂ ಅವರ ಸಾಹಿತ್ಯಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಸ್ಥಾಪಕ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ , ಸಾಹಿತಿಗಳು ಆದ ತ.ಶಿ.ಬಸವಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಸವಮೂರ್ತಿಗಳು ಮಾತನಾಡಿ ತಮ್ಮ ಜೀವನಾನುಭವ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಬೆಳವಣಿಗೆ ಬಗ್ಗೆ ತಿಳಿಸಿದರಲ್ಲದೆ. ಕಸಾಪ ದೊಂದಿಗೆ ತಮ್ಮ ನಂಟು ಹಾಗೂ ಇಂದಿಗೂ ತಾವು ಅದರಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದರ ಬಗ್ಗೆ ತಿಳಿಸಿದರು.
ಇತ್ತೀಚೆಗೆ ಅಗಲಿಗದ ಖ್ಯಾತ ಸಾಹಿತಿ,ಬರಹಗಾರ,ವಿಮರ್ಶಕರು ಆದ ಯು.ಆರ್.ಅನಂತಮೂರ್ತಿ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಕ್ಕು ಮುನ್ನಾ ಕೆಲ ನಿಮಿಷ ಮೌನಾಚರಣೆ ಮಾಡಿದರು.
ಸಿಆರ್.ಪಿ ಪ್ರೇಮಲೀಲಾ ಮಾತನಾಡಿ ಕನ್ನಡ ಶಿಕ್ಷಕರಾದವರು ಮಕ್ಕಳಲ್ಲಿ ಕನ್ನಡ ಭಾಷೆ,ನಾಡು ನುಡಿಯ ಬಗ್ಗೆ ಅರಿವನ್ನುಂಟು ಮಾಡುವುದರ ಜೊತೆಗೆ ಕನ್ನಡ ಭಾಷೆ ಕಲಿಕೆಗೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು. ಶಾಂತಲಾ ಕಾವ್ಯಗಳನ್ನು ಹಾಡಿದರು. ಶಿವಮ್ಮ ಹಾಗೂ ಸರ್ವಮಂಗಳ ಪ್ರಾರ್ಥಿಸಿ, ಶಿಕ್ಷಕ ನಾಗೇಂದ್ರಪ್ಪ ಸ್ವಾಗತಿಸಿ, ಶಿಕ್ಷಕ ರಾಮಚಂದ್ರಪ್ಪ ನಿರೂಪಿಸಿ, ಸಿದ್ದೇಶ್ವರ್ ವಂದಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ