ಹುಳಿಯಾರು ಪಟ್ಟಣದ ಇತಿಹಾಸ ಪ್ರಸಿದ್ಧ ಅನಂತಶಯನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಗುರುವಾರ ಸಂಜೆ ನಡೆದ ಸಪ್ತದ್ವಾರ ವೈಕುಂಠ ದರ್ಶನ ವೀಕ್ಷಣೆಗೆ ಅಪಾರ ಸಂಖ್ಯೆಯ ಜನ ನೆರೆದಿದ್ದು ಸರದಿ ಸಾಲಿನಲ್ಲಿ ನಿಂತು ಸ್ವಾಮಿಯ ವಿಶೇಷ ಅಲಂಕಾರವನ್ನು ಕಣ್ತುಂಬಿಕೊಂಡರು.
![]() |
| ಹುಳಿಯಾರಿನ ಶ್ರೀರಂಗನಾಥಸ್ವಾಮಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು. |
![]() |
| ಹುಳಿಯಾರಿನ ಅನಂತಶಯನ ಶ್ರೀ ರಂಗನಾಥಸ್ವಾಮಿಯ ಸಪ್ತದ್ವಾರ ವೈಕುಂಠ ದರ್ಶನದ ಅಂಗವಾಗಿ ಮಾಡಿದ್ದ ಆಕರ್ಷಕ ಅಲಂಕಾರ. |
![]() |
| ಹುಳಿಯಾರಿನ ಮುಖ್ಯಪ್ರಾಣ ಭಜನಾ ಮಂಡಳಿಯವರು ವೈಕುಂಠ ಏಕಾದಶಿ ಅಂಗವಾಗಿ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಭಜನಾಕಾರ್ಯ ನಡೆಸಿಕೊಟ್ಟರು. |
ರಂಗನಾಥಸ್ವಾಮಿ ದೇವಾಲಯದಲ್ಲಿ ಇದೇ ಪ್ರಪ್ರಥಮ ಬಾರಿ ಸಪ್ತದ್ವಾರ ವೈಕುಂಠದರ್ಶನ ಏರ್ಪಡಿಸಿದ್ದು ಗ್ರಾಮದೇವತೆಗಳಾದ ಹುಳಿಯಾರಮ್ಮ, ದುರ್ಗಮ್ಮ ಹಾಗೂ ಆಂಜನೇಯ ಸ್ವಾಮಿಯ ಸಮ್ಮುಖದಲ್ಲಿ ಹೋಮ-ಹವನಾದಿಗಳನ್ನು ನಡೆಸಿದ್ದರು. ಸಂಜೆ ವೇಳೆಗೆ ದೇವಾಲಯ ಆವರಣದಲ್ಲಿ ಸಪ್ತದ್ವಾರಗಳನ್ನು ಸಿದ್ದಗೊಳಿಸಿ ಅಲಂಕರಿಸಿದ್ದರಲ್ಲದೆ ರಂಗನಾಥಸ್ವಾಮಿಯ ಮೂಲ ವಿಗ್ರಹವನ್ನು ಸಹ ಆಕರ್ಷಕವಾಗಿ ಅಲಂಕರಿಸಿದ್ದರು. ಸಪ್ರದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆಯಲು ಸಂಜೆಯಿಂದಲೇ ಬಾರಿ ಜನ ಸೇರಿದ್ದು ಬಾಗಿಲು ತೆರೆಯುವುದನ್ನು ಕಾದಿದ್ದರು. ಸ್ವಾಮಿಗೆ ಮಹಾಮಂಗಳಾರತಿ ನಡೆದ ಬಳಿಕ ಮುಖ್ಯದ್ವಾರಕ್ಕೂ ಪೂಜೆ ಸಲ್ಲಿಸಿದ ನಂತರ ಬಾಗಿಲು ತೆರೆದು ಭಕ್ತರ ದರ್ಶನಕ್ಕೆ ಅನುವುಮಾಡಿಕೊಡಲಾಯಿತು. ಭಕ್ತರು ಸರದಿ ಸಾಲಿನಲ್ಲಿ ಸಾಗುತ್ತಾ ಸ್ವಾಮಿಗೆ ಹಣ್ಣುಕಾಯಿ ಮಾಡಿಸಿದರು. ಸರದಿಸಾಲು ದೇವಾಲಯದಿಂದ ಹುಳಿಯಾರಮ್ಮನ ದೇವಾಲಯದವರೆಗಿದ್ದರೂ ಸಹ ನೂಕುನುಗ್ಗಲಿಗೆ ಅವಕಾಶಕೊಡದೆ ಭಕ್ತರು ಶಾಂತರೀತಿಯಲ್ಲಿ ಸಾಗುತ್ತಾ ಸ್ವಾಮಿಯ ದರ್ಶನ ಪಡೆದರು.
ಲಾಡು ವಿತರಣೆ : ಸಪ್ತದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆದ ಭಕ್ತರಿಗೆ ಲಾಡು ಹಾಗೂ ಗೊಜ್ಜವಲಕ್ಕಿ ವಿತರಿಸಿದರು. ಇದೇ ವೇಳೆ ಮುಖ್ಯಪ್ರಾಣ ಭಜನಾ ಮಂಡಳಿ, ಶೇಷಾದ್ರಿ, ವೆಂಕಟಾದ್ರಿ, ಮಾರುತಿ ಭಜನಾ ಮಂಡಳಿಯವರು ರಂಗನಾಥಸ್ವಾಮಿಯ ಗೀತೆಗಳನ್ನು ಹಾಡಿದರು.
ವೈಕುಂಠ ಏಕಾದಶಿ ಸಮಿತಿಯ ಅಧ್ಯಕ್ಷ ಧನುಷ್ ರಂಗನಾಥ್, ರಂಗನಾಥ ಶೆಟ್ಟಿ, ವಿಶ್ವನಾಥ್,ಕುಮಾರ್,ಹೇಮಂತ್ , ಕಾಂತರಾಜು,,ನರಸಿಂಹಮೂರ್ತಿ, ರಾಘವೇಂದ್ರ, ಶೇಷಾದ್ರಿ, ಅಶೋಕ್ ಬಾಬು, ಎಸ್.ಎಸ್.ಆರ್ ದಯಾನಂದ್,ಭೈರೇಶ್,ಮುರುಳಿ ಸೇರಿದಂತೆ ಸಮಿತಿಯವರು ಉಪಸ್ಥಿತರಿದ್ದರು.



ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ